ಮುಂಬೈ, ಅ 30 (DaijiworldNews/DB): ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವೀಸ್ ವಿರುದ್ದ ಟ್ವಿಟರ್ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪದಲ್ಲಿ ಪಿಎಚ್ಡಿ ವಿದ್ಯಾರ್ಥಿಯೋರ್ವನನ್ನು ಮಹಾರಾಷ್ಟ್ರ ಸೈಬರ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಅಹಮದ್ ನಗರದ ವಿಶ್ವವಿದ್ಯಾಲಯದ 29 ವರ್ಷದ ಪಿಎಚ್ಡಿ ವಿದ್ಯಾರ್ಥಿಯನ್ನು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಈ ಸಂಬಂಧ ಅಕ್ಟೋಬರ್ 14ರಂದು ಸೈಬರ್ ವಿಭಾಗದಲ್ಲಿ ದೂರು ದಾಖಲಾಗಿತ್ತು. ಮಹಿಳಾ ಪತ್ರಕರ್ತರನ್ನು ಕೂಡಾ ಈತ ನಿಂದಿಸಿದ್ದ. ಪೊಲೀಸರು ದೂರು ದಾಖಲಿಸಿರುವ ಬಗ್ಗೆ ತಿಳಿದುಕೊಂಡು ವರ್ಚುವಲ್ ಪ್ರೈವೆಟ್ ನೆಟ್ವರ್ಕ್ ಬಳಸಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಆರೋಪಿ ಯತ್ನ ನಡೆಸಿದ್ದ. ಅಲ್ಲದೆ ಪೋಸ್ಟ್ ಮುಂಬೈಯಿಂದ ಆಗಿದೆ ಎಂಬುದನ್ನೂ ತೋರಿಸಲು ಶತ ಪ್ರಯತ್ನ ನಡೆಸಿದ್ದ. ಆದರೆ ಸೈಬರ್ ಪೊಲೀಸರು ಟ್ವೀಟ್ನ ತೀವ್ರ ಪರಿಶೀಲನೆ ನಡೆಸಿ ಅದು ಅಹಮದ್ ನಗರದ ಮಹಾತ್ಮ ಪುಲೆ ಕೃಷಿ ವಿವಿಯಿಂದ ಮಾಡಲಾದ ಪೋಸ್ಟ್ ಎಂಬುದನ್ನು ಕಂಡುಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಆರೋಪಿಯಿಂದ ಎರಡು ಮೊಬೈಲ್ ಫೋನ್ , ಒಂದು ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿದೆ. ನಿವಾರ ಮುಂಬೈನ ಸ್ಥಳೀಯ ನ್ಯಾಯಾಲಯವೊಂದರ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿದ್ದು, ನವೆಂಬರ್ 2ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ವರದಿಯಾಗಿದೆ.