ಸೂರತ್, ಅ 30 (DaijiworldNews/DB): ತಾಯಿಯ ಎದೆಹಾಲು ಮಕ್ಕಳಿಗೆ ಅಮೃತ ಸಮಾನ. ಎದೆಹಾಲನ್ನೇ ಬಳಸಿಕೊಂಡು ದಂತ ವೈದ್ಯೆಯೊಬ್ಬರು ಆಭರಣ ತಯಾರಿಸುತ್ತಿದ್ದು, ಸ್ಮರಣಿಕೆಯಾಗಿ ನೀಡುತ್ತಿದ್ದಾರೆ.
ಸೂರತ್ ಮೂಲದ ದಂತವೈದ್ಯೆ ಡಾ. ಅದಿತಿ ಅವರೇ ತಾಯಿಯ ಎದೆಹಾಲಿನಿಂದ ಆಭರಣ ತಯಾರಿಸುವವರು. ಮಗುವಿನ ಕೂದಲು ಮತ್ತು ಜನನ ಸಮಯದಲ್ಲಿ ಹೊಕ್ಕುಳ ಬಳ್ಳಿಯನ್ನು ಉಳಿಸಿಕೊಂಡು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ತಯಾರಿಸುತ್ತಾರೆ. ಪೆಂಡೆಂಟ್, ಇತರ ಆಭರಣಗಳ ವಿನ್ಯಾಸಕ್ಕಾಗಿ ಇವುಗಳನ್ನು ಅದಿತಿ ಬಳಕೆ ಮಾಡುತ್ತಾರೆ. ಅಲ್ಲದೆ ಈ ಆಭರಣಗಳನ್ನು ತಯಾರಿಸಲು ಇದೀಗ ತಾಯಿಯ ಎದೆಹಾಲನ್ನೇ ಬಳಸುತ್ತಿದ್ದಾರೆ.
ಎದೆಹಾಲನ್ನು ಸಂರಕ್ಷಿಸಿ ಅದನ್ನು ಕಲ್ಲಾಗಿ ಪರಿವರ್ತನೆ ಮಾಡುತ್ತಾರೆ. ಬಳಿಕ ಆಭರಣಗಳ ವಿನ್ಯಾಸಕ್ಕಾಗಿ ಅದನ್ನು ಬಳಕೆ ಮಾಡುತ್ತಾರೆ. ಹಾಲಿನ ಉತ್ಪನ್ನಗಳು ಎಂದಿಗೂ ಹಾಳಾಗದ ಕಾರಣ ಈ ಆಭರಣಗಳು ದೀರ್ಘಬಾಳಿಕ ಬರುತ್ತವೆ. ಈ ಆಭರಣಗಳನ್ನು ತಯಾರಿಸಲು ಒಟ್ಟು ಪ್ರಕ್ರಿಯೆಗೆ ಸುಮಾರು 15 ದಿನ ಬೇಕಾಗುತ್ತದೆ ಎನ್ನುತ್ತಾರೆ ಅದಿತಿ.
ಎದೆಹಾಲಿನಿಂದ ವಿನ್ಯಾಸಗೊಳಿಸಿದ ಆಭರಣಗಳಿಗೆ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಾಕಷ್ಟು ಬೇಡಿಕೆಯಿದೆ. ವಿದೇಶಗಳಿಂದ ಆರ್ಡರ್ ಬರುತ್ತವೆ. ಅಲ್ಲದೆ ವಿದೇಶಗಳಿಂದ ಕೊರಿಯರ್ ಮೂಲಕ ಎದೆಹಾಲು ಕಳಿಸಿ ಅದರಿಂದ ಆಭರಣ ತಯಾರಿಸಿಕೊಳ್ಳುವಂತೆ ಹಲವರು ಕೇಳಿಕೊಳ್ಳುತ್ತಾರಂತೆ.