ಕೊಯಮತ್ತೂರು, ಅ 30 (DaijiworldNews/DB): ಕೊಯಮತ್ತೂರಿನಲ್ಲಿ ಕಾರು ಸ್ಪೋಟಕ್ಕೆ ನಾಲ್ಕು ದಿನಗಳ ಮೊದಲೇ ಕೇಂದ್ರ ಎಚ್ಚರಿಕೆ ನೀಡಿತ್ತು ಎಂಬ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಹೇಳಿಕೆಯನ್ನು ತಮಿಳುನಾಡು ಪೊಲೀಸರು ತಳ್ಳಿ ಹಾಕಿದ್ದಾರೆ.
ಸುಳ್ಳು ಆರೋಪ ಹೊರಿಸಿ ಪೊಲೀಸರ ಮಾನಹಾನಿ ಮಾಡುವ ಉದ್ದೇಶ ಇದು ಎಂದು ತಮಿಳುನಾಡು ರಾಜ್ಯ ಪೊಲೀಸ್ ಆಕ್ರೋಶ ವ್ಯಕ್ತಪಡಿಸಿದೆ. ಇನ್ನು ಸ್ಪೋಟದ ಬಗ್ಗೆ ನಿರ್ದಿಷ್ಟ ಎಚ್ಚರಿಕೆಯನ್ನು ತಮಿಳುನಾಡು ಪೊಲೀಸರಿಗೆ ಕೇಂದ್ರ ನೀಡಿತ್ತು ಎಂಬ ಅಣ್ಣಾಮಲೈ ಹೇಳಿಕೆಯನ್ನು ಅಸಂಬದ್ದ ಎಂಬುದಾಗಿ ಪೊಲೀಸರು ಟೀಕಿಸಿದ್ದಾರೆ. ಕರ್ನಾಟಕದ ಮಾಜಿ ಪೊಲೀಸ್ ಅಧಿಕಾರಿಯವರು ಎಚ್ಚರಿಕೆ ಉಲ್ಲೇಖಿಸಿದ ಕಾರಣ ಎಲ್ಲಾ ರಾಜ್ಯಗಳಿಗೆ ಅದನ್ನು ಕೇಂದ್ರ ಕಳುಹಿಸಿತ್ತೇ ಹೊರತು ಆ ಎಚ್ಚರಿಕೆಯಲ್ಲಿ ಎಲ್ಲಿಯೂ ಕೊಯಮತ್ತೂರಿನಲ್ಲೇ ಸ್ಪೋಟ ನಡೆಯುತ್ತದೆ ಎಂಬ ಬಗ್ಗೆ ಉಲ್ಲೇಖವಿರಲಿಲ್ಲ. ಆದರೆ ಅಣ್ಣಾಮಲೈ ಅವರು ಪೊಲೀಸರು ಮಾಹಿತಿಯಿದ್ದರೂ ಮುನ್ನೆಚ್ಚರಿಕೆ ವಹಿಸಲಿಲ್ಲ ಎಂದು ಪೊಲೀಸರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಮಿಳುನಾಡು ಪೊಲೀಸರು ಹೇಳಿದ್ದಾರೆ.
ಕೊಯಮತ್ತೂರಿನ ಉಕ್ಕಡಂ ಪ್ರದೇಶದ ದೇವಸ್ಥಾನದ ಹೊರಗೆ ಎಲ್ಪಿಜಿ ಸಿಲಿಂಡರ್ ಸಾಗಿಸುತ್ತಿದ್ದ ಮಾರುತಿ 800 ಕಾರು ಅಕ್ಟೋಬರ್ 23ರಂದು ಸ್ಪೋಟಗೊಂಡಿತ್ತು. ಕಾರಿನಲ್ಲಿದ್ದ ಎಂಜಿನಿಯರಿಂಗ್ ಪದವೀಧರ ಜಮೀಶಾ ಮುಬಿನ್ ಸ್ಪೋಟದಲ್ಲಿ ಸಾವನ್ನಪ್ಪಿದ್ದ.
ಘಟನೆ ಸಂಬಂಧ ನಿನ್ನೆ ರಾತ್ರಿ ನೀಡಿದ ಹೇಳಿಕೆಯಲ್ಲಿ ಅಣ್ಣಾಮಲೈ ಅವರು, ಘಟನೆಗೆ ನಾಲ್ಕು ದಿನ ಮೊದಲೇ ಕೇಂದ್ರ ಈ ಬಗ್ಗೆ ಎಚ್ಚರಿಕೆ ನೀಡಿತ್ತು ಎಂದಿದ್ದರು. ಅಲ್ಲದೆ ಪ್ರಕರಣವನ್ನು ಎನ್ಐಎ ತನಿಖೆಗೆ ವರ್ಗಾಯಿಸುವಲ್ಲಿ ವಿಳಂಬ ಧೋರಣೆ ಅನುಸರಿಸುವುದರೊಂದಿಗೆ ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದರು.