ಚಿತ್ರದುರ್ಗ, ಅ 30 (DaijiworldNews/DB): ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರದರ್ಶನ ನೀಡಲು ಭಗತ್ ಸಿಂಗ್ರನ್ನು ಗಲ್ಲಿಗೇರಿಸುವ ಸಂದರ್ಭದ ಅಭ್ಯಾಸ ಮಾಡಲು ಹೋಗಿ ಏಳನೇ ತರಗತಿ ಬಾಲಕನೊಬ್ಬ ದುರಂತ ಅಂತ್ಯ ಕಂಡ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಎಸ್ ಎಲ್ ವಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ, ಚಿತ್ರದುರ್ಗದ ಕೆಳಗೋಟೆ ಬಡಾವಣೆಯ ನಾಗರಾಜ್ ಮತ್ತು ಭಾಗ್ಯಲಕ್ಷ್ಮೀ ದಂಪತಿಯ ಪುತ್ರ ಸಂಜಯ್ ಗೌಡ (12) ಮೃತ ದುರ್ದೈವಿ. ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಆತ ಭಗತ್ ಸಿಂಗ್ ಪಾತ್ರ ಮಾಡಲು ನಿರ್ಧರಿಸಿದ್ದ. ಇದಕ್ಕಾಗಿ ಮನೆಯಲ್ಲಿ ಶನಿವಾರ ಅಭ್ಯಾಸನಿರತನಾಗಿದ್ದ. ಮನೆಯಲ್ಲಿ ಯಾರೂ ಇರದ ಸಂದರ್ಭದಲ್ಲಿ ಅಭ್ಯಾಸ ಮಾಡುತ್ತಿದ್ದ ಸಂಜಯ್, ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸುವ ಪಾತ್ರವನ್ನು ಅಭ್ಯಾಸ ಮಾಡಲು ಫ್ಯಾನ್ಗೆ ಹಗ್ಗ ಕಟ್ಟಿ ಮುಖಕ್ಕೆ ಉಲ್ಲನ್ ಟೋಪಿ ಹಾಕಿ ಮಂಚದ ಮೇಲಿನಿಂದ ಹಾರಿದ್ದಾನೆ. ಈ ವೇಳೆ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕ ಮೃತಪಟ್ಟಿದ್ದಾನೆ.
ಹೆತ್ತವರು ಸಂಜೆ ವೇಳೆಗೆ ಮನೆಗೆ ಬಂದು ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆ ವೇಳೆಗಾಗಲೇ ಬಾಲಕ ಮೃತಪಟ್ಟಿದ್ದ. ಚಿತ್ರದುರ್ಗ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.