ರಾಂಚಿ, ಅ 30 (DaijiworldNews/DB): ಪರೀಕ್ಷೆ ವೇಳೆ ನಕಲು ಮಾಡುತ್ತಿರುವ ಶಂಕೆಯಿಂದ ಶಿಕ್ಷಕಿ ಬೈದದಕ್ಕೆ ಮನನೊಂದ ವಿದ್ಯಾರ್ಥಿನಿಯೋರ್ವಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾರ್ಖಂಡ್ನ ಜಮ್ಶೆಡ್ಪುರದಲ್ಲಿ ನಡೆದಿದೆ.
ಸರದಾಮೋನಿ ಬಾಲಕಿಯರ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ರಿತು ಮುಖಿ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಅಕ್ಟೋಬರ್ 14ರಂದು ಶಾಲೆಯಿಂದ ಮನೆಗೆ ಬಂದು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಈ ವೇಳೆ ತಾಯಿ ಮತ್ತು ಸಹೋದರ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಸಹೋದರೆಯನ್ನು ಪಕ್ಕದ ಮನೆಗೆ ಕಳುಹಿಸಿದ್ದಳು. ಕೂಡಲೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಏಳು ದಿನ ಜೀವನ್ಮರಣ ಹೋರಾಟದಲ್ಲಿದ್ದಳು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಕ್ಟೋಬರ್ 21ರಂದು ಆಕೆ ಸಾವನ್ನಪ್ಪಿದ್ದಾಳೆ.
ಆರೋಪವನ್ನು ಶಿಕ್ಷಕಿ ನಿರಾಕರಿಸಿದ್ದಾರೆ. ಆದರೆ ರಿತುವನ್ನು ಶಿಕ್ಷಕಿ ಅವಮಾನಿಸಿರುವುದಾಗಿ ಆಕೆಯ ಸಹಪಾಠಿಗಳು ಹೇಳಿದ್ದಾರೆ. ಘಟನೆ ನಂತರ ಶಿಕ್ಷಕಿಯನ್ನು ಶಾಲೆಯಿಂದ ಅಮಾನತು ಮಾಡಲಾಗಿದ್ದು, ಘಟನೆಗೆ ಕಾರಣವಾದ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.