ಲಕ್ನೋ, ಅ 30 (DaijiworldNews/DB): ಡೆಂಗ್ಯೂ ರೋಗಿಗೆ ಪ್ಲೇಟ್ಲೆಟ್ ಬದಲು ಮೂಸಂಬಿ ಜ್ಯೂಸ್ ನೀಡಿ ಆತನ ಸಾವಿಗೆ ಕಾರಣವಾದ ಆರೋಪ ಎದುರಿಸುತ್ತಿರುವ ಗ್ಲೋಬಲ್ ಆಸ್ಪತ್ರೆಯ ಕಟ್ಟಡ ನೆಲಸಮಗೊಳಿಸುವ ಪ್ರಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರದ ನಿರ್ಧಾರಕ್ಕೆ ಅಲಾಹಾಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕಟ್ಟಡ ಮಾಲಕರ ಆಕ್ಷೇಪಗಳನ್ನು ಪರಿಶೀಲಿಸಿದ ಬಳಿಕವೇ ಪ್ರಾಧಿಕಾರವು ಇಂತಹ ಆದೇಶ ನೀಡಬೇಕು ಎಂಬುದು ಕಾನೂನು. ಹೀಗಾಗಿ ಆರು ವಾರಗಳ ಕಾಲ ಅಥವಾ ಎರಡನೇ ಪ್ರತಿವಾದಿ ಆದೇಶ ಸ್ವೀಕರಿಸುವ ಮುನ್ನ ಕಟ್ಟಡ ತೆರವುಗೊಳಿಸಲು ಅವಕಾಶವಿಲ್ಲ. ಈ ಸಂಬಂಧ ಯಾವುದೇ ಬಲವಂತದ ಕ್ರಮ ಆಗಬಾರದು ಎಂಬುದಾಗಿ ನ್ಯಾಯಮೂರ್ತಿಗಳಾದ ಸೂರ್ಯ ಪ್ರಕಾಶ್ ಕೇಸರ್ವಾನಿ ಮತ್ತು ವಿಕಾಸ್ ಬುಧ್ವರ್ ಅವರಿದ್ದ ಪೀಠ ಆದೇಶಿಸಿದೆ.
ಶ್ಯಾಮ್ ನಾರಾಯಣ್ ಎಂಬವರಿಗೆ ಭೋಗ್ಯಕ್ಕೆ ಕಟ್ಟಡ ನೀಡಲಾಗಿದ್ದು, ತನಗೆ ಅಧಿಕಾರಿಗಳು ಯಾವುದೇ ನೋಟಿಸ್ ಅಥವಾ ಆದೇಶವನ್ನು ನೀಡಿಲ್ಲ. ಅಕ್ರಮವಾಗಿ ಕಟ್ಟಡ ನಿರ್ಮಾಣಗೊಂಡಿದ್ದರೆ ಅದನ್ನು ತೆರವು ಮಾಡಲು ಸಿದ್ದ ಎಂದು ಕಟ್ಟಡದ ಮಾಲಕಿ ಹೇಳಿದರು. ಈ ವೇಳೆ ಸರ್ಕಾರವು ಕಟ್ಟಡ ನಕ್ಷೆ ಸಹಿತ ಅರ್ಜಿದಾರರು ಆಕ್ಷೇಪಣೆ ಸಲ್ಲಿಸಿದರೆ ಅದನ್ನು ಪರಿಶೀಲನೆ ನಡೆಸಿ ಬಳಿಕ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿತು.
ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಮುಂದಿನ ಎರಡು ವಾರಗಳೊಳಗಾಗಿ ಅರ್ಜಿದಾರರು ಕಟ್ಟಡದ ನಕ್ಷೆ ಸಲ್ಲಿಸಬೇಕು. ಅದನ್ನು ಪರಿಶೀಲಿಸಿದ ಬಳಿಕ ನಾಲ್ಕು ವಾರಗಳೊಳಗಾಗಿ ಪಿಡಿಎಯು ಸೂಕ್ತ ಆದೇಶವನ್ನು ಕಾನೂನಿನ ನೆಲೆಗಟ್ಟಿನಲ್ಲಿ ಹೊರಡಿಸಬೇಕು ಎಂದು ಸೂಚಿಸಿತು.