ಕೇರಳ, ಅ 30 (DaijiworldNews/HR): ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಕಾಣಿಸಿಕೊಂಡಿರುವ ಆಫ್ರಿಕನ್ ಹಂದಿ ಜ್ವರ ಈಗ ಕೇರಳದಲ್ಲೂ ಆತಂಕ ಹೆಚ್ಚಿಸುತ್ತಿದ್ದು, ಕೊಟ್ಟಾಯಂ ಬಳಿಕ ತ್ರಿಶೂರ್ನ ಕಾಡಂಗೋಡೆಯಲ್ಲಿ 40 ಹಂದಿಗಳು ಈ ವೈರಸ್ಗೆ ಬಲಿಯಾಗಿದ್ದು, 600ಕ್ಕೂ ಹೆಚ್ಚು ಹಂದಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ.
ಆಫ್ರಿಕನ್ ಹಂದಿ ಜ್ವರವು ಶೇ.100ರಷ್ಟು ಮರಣ ಸಾಧ್ಯತೆಯಿರುವ ವೈರಲ್ ರೋಗವಾಗಿದ್ದು, ಇದು ಮನುಷ್ಯರಿಗೆ ಹರಡುವುದಿಲ್ಲ. ಆದರೆ ಒಂದು ಹಂದಿಯಿಂದ ಮತ್ತೂಂದು ಹಂದಿಗೆ ಹರಡುತ್ತದೆ.
ಇನ್ನು ಹಂದಿಗಳ ನಡುವೆ ಪರಸ್ಪರ ದೈಹಿಕ ಸಂಪರ್ಕ ಮತ್ತು ಶರೀರದ ದ್ರವಗಳ ವಿನಿಮಯದಿಂದ ವೈರಸ್ ವ್ಯಾಪಿಸುತ್ತದೆ. ಅಲ್ಲದೇ ಸರಿಯಾಗಿ ಬೇಯಿಸದ ಸೋಂಕಿತ ಆಹಾರವನ್ನು ಹಂದಿಗಳಿಗೆ ನೀಡುವುದರಿಂದಲೂ ಇದು ಹಬ್ಬುತ್ತದೆ ಎನ್ನಲಾಗಿದೆ.
ಹಂದಿ ಮಾಂಸ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು, ಸೋಂಕು ಪತ್ತೆಯಾದ ಪ್ರದೇಶದಿಂದ ಹಂದಿಗಳ ಸಾಗಣೆ ಸ್ಥಗಿತಗೊಳಿಸಲು, ಸೋಂಕು ಪತ್ತೆಯಾದ ಪ್ರದೇಶದಿಂದ ಹಂದಿ ಮಾಂಸ, ಮೇವು ಸಾಗಣೆ ಸ್ಥಗಿತ ಮಾಡಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ.