ಸೂರತ್, ಅ 29 (DaijiworldNews/DB): ಬಿಜೆಪಿ ಹೊರತುಪಡಿಸಿ ಬೇರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಬಗ್ಗೆ ಕಾರ್ಪೋರೇಟ್ ಸಂಸ್ಥೆಗಳಿಗೆ ಆತಂಕ ಇದೆ. ಹೀಗಾಗಿ ಶೇ 95ರಷ್ಟು ದೇಣಿಗೆ ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿ ಪಾಲಾಗುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಆರೋಪಿಸಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರ ನಿರತರಾಗಿರುವ ಅವರು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಬಿಜೆಪಿಯೇತರ ಯಾವುದೇ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಕೆಲವು ಕಾರ್ಪೋರೇಟ್ ಸಂಸ್ಥೆಗಳು ಬಯಸುತ್ತವೆ. ಆದರೆ ಅಂತಹ ಸಂಸ್ಥೆಗಳಿಗೆ ಬಿಜೆಪಿ ಬೆದರಿಕೆ ಹಾಕಿ ಅದು ಬಿಜೆಪಿಯೇತರ ಪಕ್ಷಗಳಿಗೆ ಹೋಗದಂತೆ ತಡೆಯುತ್ತದೆ ಎಂದರು.
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಆದರೆ ಇಂತಹ ವ್ಯವಸ್ಥೆಯಡಿ ದೇಣಿಗೆ ಮಾತ್ರ ಕೇವಲ ಒಂದು ಪಕ್ಷಕ್ಕೆ ಹೋಗುತ್ತಿದೆ. ಅದೇ ದೇಣಿಗೆ ಮೂಲಕ ಕೋಟ್ಯಾಂತರ ರೂ. ಹಣ ಸಂಗ್ರಹಿಸಿ ದೇಶಾದ್ಯಂತ ಪಂಚತಾರಾ ಸೌಲಭ್ಯ ಹೊಂದಿರುವ ಕಚೇರಿಗಳನ್ನು ಬಿಜೆಪಿ ನಿರ್ಮಿಸುತ್ತಿದೆ. ಅಲ್ಲದೆ ಸರ್ಕಾರ ಬದಲಾವಣೆ ಮಾಡಲು ಈ ಹಣಕಾಸನ್ನೇ ಬಿಜೆಪಿ ಬಳಕೆ ಮಾಡುತ್ತಿದೆ ಎಂದು ದೂರಿದರು.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ಅವರು ತಮ್ಮ ವಿರುದ್ದ ಯಾವುದೇ ಸುದ್ದಿಗಳು ಪ್ರಕಟವಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಬೇಕಾದಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಎಂದು ಆಪಾದಿಸಿದರು.