ಶಿವಮೊಗ್ಗ, ಅ 29 (DaijiworldNews/DB): ಆಪರೇಷನ್ ಕಮಲ ಕೊನೆಗಾಣಿಸಲು ಇದರ ವಿರುದ್ದ ಸುಪ್ರೀಂಕೋರ್ಟ್ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳು ಆಪರೇಷನ್ ಕಮಲಕ್ಕೆ ಅಂತ್ಯಹಾಡಬೇಕು. ಆಪರೇಷನ್ ಕಮಲ ಮಾಡುವವರ ಮೇಲೆ ಸೋಮೋಟೋ ಪ್ರಕರಣ ದಾಖಲಿಸಬೇಕು ಎಂದರು.
ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮತ್ತು ಆಪರೇಷನ್ ಲೋಟಸ್ನಿಂದ ಹುಟ್ಟಿದೆ. ತೆಲಂಗಾಣದಲ್ಲಿ ಆಪರೇಷನ್ ಕಮಲ ನಡೆಸಿದ ವೇಳೆ ರೆಡ್ ಹ್ಯಾಂಡ್ ಆಗಿ ಕೋಟಿ ಕೋಟಿ ರೂ. ನೀಡಿರುವುದನ್ನು ಹಿಡಿಯಲಾಗಿದೆ. ಈ ಬಗ್ಗೆ ಶಾಸಕ ಶ್ರೀನಿವಾಸ ಗೌಡ ಅಧಿವೇಶನದಲ್ಲಿ ಹೇಳಿದ್ದರೂ, ಅದನ್ನು ಮುಚ್ಚಿ ಹಾಕುವ ಪ್ರಯತ್ನವಾಗಿದೆ ಎಂದವರು ಬಿಜೆಪಿ ವಿರುದ್ದ ಹರಿಹಾಯ್ದರು.
ಮನಿ ಲ್ಯಾಂಡ್ ರಿಂಗ್ ಆಕ್ಟ್ , ಪಿಎಂಎಲ್ ಆಕ್ಟ್ ಆಪರೇಷನ್ ಕಮಲಕ್ಕೆ ಅನ್ವಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದ ಡಿಕೆಶಿ, ಇದರ ಸತ್ಯಾಸತ್ಯತೆ ಪರಿಶೀಲಿಸಲು ಸುಪ್ರೀಂಕೋರ್ಟ್ ಮಾನಿಟರಿಂಗ್ ಮಾಡಬೇಕು ಎಂದು ಒತ್ತಾಯಿಸಿದರು.