ಬೆಂಗಳೂರು, ಅ 29 (DaijiworldNews/MS): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಲ್ಲೇಶ್ವರಂ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಶನ್ ವತಿಯಿಂದ ಸ್ಥಾಪಿಸಿರುವ ಪುನೀತ್ ಉಪಗ್ರಹ ಕೇಂದ್ರ (ಸ್ಯಾಟಲೈಟ್ ವರ್ಕ್ ಸ್ಟೇಷನ್) ಅನ್ನು ಉದ್ಘಾಟಿಸಿದರು.
ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್ ನ ವಿಶೇಷತೆ ಏನು?
ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್, 75 ವರ್ಷಗಳ ಭಾರತದ ಸ್ವಾತಂತ್ರ್ಯದ ಆಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮದ ಭಾಗವಾದ, ಭಾರತದ 75 ಉಪಗ್ರಹ ಮಿಷನ್ನ ಭಾಗವಾಗಲಿದೆ.
ಇದು ಕೆಳಮಟ್ಟದ ಭೂಕಕ್ಷೆಯಲ್ಲಿ ಅಂತರ-ಉಪಗ್ರಹ ಸಂವಹನಗಳನ್ನು ಮತ್ತು ಬಾಹ್ಯಾಕಾಶದಲ್ಲಿ IOT (ಇಂಟರ್ನೆಟ್ ಆಫ್ ಥಿಂಗ್ಸ್) ಅನ್ನು ಪ್ರದರ್ಶಿಸುತ್ತದೆ.
ಇದೊಂದು ಸ್ವದೇಶಿ ಉಪಗ್ರಹವಾಗಿದ್ದು ಸಂಪೂರ್ಣವಾಗಿ ಬೆಂಗಳೂರಿನಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. 18ನೇ ಕ್ರಾಸ್ ಮಲ್ಲೇಶ್ವರಂ ಹೈಸ್ಕೂಲ್ ಆವರಣದಲ್ಲಿರುವ ಪುನೀತ್ ಉಪಗ್ರಹ ಕೇಂದ್ರದಲ್ಲಿ ವಿನ್ಯಾಸ ಮತ್ತು ತರಬೇತಿಗಳು ನಡೆಯುತ್ತಿವೆ.