ಮುಂಬೈ, ಅ 29 (DaijiworldNews/DB): ಮಹಾ ವಿಕಾಸ ಅಘಾಡಿಯ 25 ಮಂದಿ ನಾಯಕರಿಗೆ ನೀಡಲಾಗಿದ್ದ ವರ್ಗೀಕೃತ ಭದ್ರತೆಯನ್ನು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಹಿಂಪಡೆದಿದೆ.
ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಒಳಗೊಂಡ ಮಹಾ ವಿಕಾಸ ಅಘಾಡಿಯ 25 ಮಂದಿ ನಾಯಕರಿಗೆ ಹಿಂದಿನ ಸರ್ಕಾರದಲ್ಲಿ ಭದ್ರತೆ ಒದಗಿಸಲಾಗಿತ್ತು. ಆದರೆ ಇದೀಗ ಈ ಎಲ್ಲಾ ನಾಯಕರಿಗೆ ನೀಡಲಾಗಿದ್ದ ಭದ್ರತೆಯನ್ನು ಮರು ಪರಿಶೀಲನೆಗೊಳಪಡಿಸಲಾಗಿದ್ದು, ಬಳಿಕ ಎಲ್ಲರ ಭದ್ರತೆಯನ್ನು ಸರ್ಕಾರ ರದ್ದುಗೊಳಿಸಿದೆ. ಇನ್ನು ಮುಂದೆ ಈ ನಾಯಕರ ಮನೆ ಅಥವಾ ಬೆಂಗಾವಲಿಗೆ ಶಾಶ್ವತ ಪೊಲೀಸ್ ಭದ್ರತೆ ಇರುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ನಾಯಕರ ಪೈಕಿ ಹಲವರು ಮಾಜಿ ಸಚಿವರುಗಳಾಗಿದ್ದಾರೆ. ಮಹಾರಾಷ್ಟ್ರದ ಹಿಂದಿನ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹಾಗೂ ಅವರ ಕುಟುಂಬಕ್ಕೆ ಇರುವ ಭದ್ರತೆಯನ್ನು ರದ್ದುಗೊಳಿಸಲಾಗಿಲ್ಲ. ಅದೇ ರೀತಿ ಎನ್ಸಿಪಿ ನಾಯಕ ಶರದ್ ಪವಾರ್, ಪುತ್ರಿ ಬಾರಾಮತಿ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ಹಾಗೂ ಅವರ ಕುಟುಂಬಕ್ಕೆ ನೀಡಲಾದ ಭದ್ರತೆಯನ್ನು ಮುಂದುವರಿಸಲಾಗಿದೆ. ಆದರೆ ಈ ಹಿಂದೆ ಗೃಹ ಸಚಿವರಾಗಿದ್ದ ಜಯಂತ್ ಪಾಟೀಲ್, ಛಗನ್ ಭುಜಬಲ್ ಮತ್ತು ಜೈಲಿನಲ್ಲಿರುವ ಅನಿಲ್ ದೇಶಮುಖ್ ಮತ್ತಿತರರ ಭದ್ರತೆಯನ್ನು ಮರು ಮೌಲ್ಯಮಾಪನಕ್ಕೊಳಪಡಿಸಿ ಭದ್ರತೆ ಹಿಂಪಡೆಯಲಾಗಿದೆ ಎಂದು ವರದಿ ತಿಳಿಸಿದೆ.