ಮಂಡ್ಯ, ಅ 28 (DaijiworldNews/DB): ಮುಂದಿನ ಚುನಾವಣೆಗೆ ಚನ್ನಪಟ್ಟಣದಲ್ಲೇ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ವಿರುದ್ದ ಸ್ಪರ್ಧಿಸುವುದಾಗಿ ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಸಿ. ಪಿ. ಯೋಗೇಶ್ವರ್ ಘೋಷಿಸಿದ್ದಾರೆ.
ಮಂಡ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಶುಕ್ರವಾರ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಚೆನ್ನಪಟ್ಟಣದಲ್ಲಿ ಸ್ಪರ್ಧಿಸುವುದಾಗಿ ಖಚಿತಪಡಿಸಿದರು.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದಿನ ಚುನಾವಣೆಯಲ್ಲಿ ಅವರು ಅಲ್ಲೇ ಸ್ಪರ್ಧಿಸಿ ಗೆಲುವು ಕಂಡವರು. ಈ ಬಾರಿಯೂ ಅಲ್ಲೇ ಸ್ಪರ್ಧೆ ನಡೆಸಬೇಕಲ್ಲವೇ? ಚನ್ನಪಟ್ಟಣ ನನ್ನ ಸ್ವಂತ ಕ್ಷೇತ್ರ. ಹೀಗಾಗಿ ನಾನು ಅಲ್ಲಿಯೇ ಸ್ಪರ್ಧೆ ನಡೆಸುತ್ತೇನೆ. ಸ್ಪರ್ಧಾತ್ಮಕ ಭಾವದಿಂದ ಈ ಚುನಾವಣೆಯನ್ನು ನಾನು ಎದುರಿಸುತ್ತೇನೆ. ಅಲ್ಲದೆ ಸೋಲು-ಗೆಲುವನ್ನೂ ಸಮಾನಾಗಿ ಸ್ವೀಕರಿಸುತ್ತೇನೆ ಎಂದರು.
ಈ ಚುನಾವಣೆಯಲ್ಲಿ ಬಹುಮತದೊಂದಿಗೆ ಸಿಎಂ ಆಗುವುದು ನಿಶ್ಚಿತ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಎಚ್ಡಿಕೆ ಹೇಳಿಕೆಯಲ್ಲಿ ತೂಕವಾಗಲೀ, ಗಾಂಭೀರ್ಯವಾಗಲೀ ಇಲ್ಲ. ಅವರ ಪಕ್ಷಕ್ಕೆ ಪೂರ್ಣ ಬಹುಮತ ಬರಬಹುದೆಂದು ಅವರು ಹೇಳಿಕೊಳ್ಳುತ್ತಾರೆ. ಆದರೆ ಫಲಿತಾಂಶ ಏನಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮತ್ತೊಮ್ಮೆ ಬರುವುದು ಖಚಿತ ಎಂದವರು ತಿಳಿಸಿದರು.
ಜೆಡಿಎಸ್ನ ಪಂಚರತ್ನ ಪಾದಯಾತ್ರೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಪಿವೈ, ಈಗಾಗಲೇ ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿ ಉತ್ತಮ ಆಡಳಿತ ನೀಡಲಾಗದೆ ರಾಜ್ಯದ ಜನತೆಯನ್ನು ನಿರಾಶೆಗೆ ದೂಡಿದ್ದಾರೆ. ಯಾತ್ರೆ ಮಾಡುವುದು ಅವರಿಗೆ ಬಿಟ್ಟ ವಿಚಾರ. ಆದರೆ ಜನ ಅವರಿಗೆ ಮನ್ನಣೆ ಕೊಡುವುದಿಲ್ಲ ಎಂದರು.