ಕೊಟ್ಟಾಯಂ, ಅ 28 (DaijiworldNews/DB): ಹಕ್ಕಿಜ್ವರ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಕೋಳಿಗಳನ್ನು ಕೊಲ್ಲುವ ಕಾರ್ಯ ಆರಂಭವಾಗಿದ್ದು, 10,000ಕ್ಕೂ ಅಧಿಕ ಬಾತುಕೋಳಿಗಳನ್ನು ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ.
ಹಕ್ಕಿಜ್ವರ ಪೀಡಿತ ಪ್ರದೇಶಗಳಲ್ಲಿ ಕೋಳಿಗಳನ್ನು ಕೊಲ್ಲಲಾಗುತ್ತಿದೆ. ಇಲ್ಲಿಂದ ಒಂದು ಕಿಮೀ ವ್ಯಾಪ್ತಿಯಲ್ಲಿ ಕೋಳಿಗಳನ್ನು ಕೊಲ್ಲುವ ಪ್ರಕ್ರಿಯೆ ಗುರುವಾರದಿಂದಲೇ ಆರಂಭಗೊಂಡಿದ್ದು, ಶುಕ್ರವಾರವೂ ಮುಂದುವರಿದಿದೆ.
ಸುಮಾರು 20,471 ಬಾತುಕೋಳಿಗಳನ್ನು ಕೊಲ್ಲಲು ಆಡಳಿತವು ಮುಂದಾಗಿದೆ. ಇದಕ್ಕಾಗಿ ಎಂಟು ತಂಡಗಳು ಸಕ್ರಿಯವಾಗಿವೆ ಎಂದು ತಿಳಿದು ಬಂದಿದೆ. ಇನ್ನು ಕೇಂದ್ರ ಆರೋಗ್ಯ ಸಚಿವಾಲಯವು ಕೇರಳಕ್ಕೆ ಉನ್ನತ ಮಟ್ಟದ ತಂಡವನ್ನು ಕಳುಹಿಸಿದ್ದು, ಹಕ್ಕಿಜ್ವರ ಹರಡುವಿಕೆ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ತಂಡವು ಪರಿಶೀಲನೆ ನಿರತವಾಗಿದ್ದು, ಮಾಹಿತಿಗಳನ್ನು ಕಲೆ ಹಾಕುತ್ತಿದೆ ಎನ್ನಲಾಗಿದೆ.