ಮುಂಬೈ, ಅ 28 (DaijiworldNews/DB): ಮುಂಬೈನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್ಎಸ್ಸಿ) ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಭೆಯಲ್ಲಿ ಪಾಕ್ ಮೂಲದ ಉಗ್ರ ಸಾಜಿದ್ ಮಿರ್ನ ಆಡಿಯೋ ಕ್ಲಿಪ್ನ್ನು ಭಾರತ ಪ್ಲೇ ಮಾಡಿದೆ.
ಮುಂಬೈಯಲ್ಲಿ ನಡೆದ 26/11 ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಈತ ಚಾಬಾದ್ ಹೌಸ್ ಮೇಲೆ ದಾಳಿ ನಡೆಸಲು ನಿರ್ದೇಶನ ನೀಡುತ್ತಿರುವುದು ಈ ಆಡಿಯೋ ಕ್ಲಿಪ್ನಲ್ಲಿ ದಾಖಲಾಗಿದ್ದು, ಪಾಕ್ನ ವಿರುದ್ದ ಸಿಕ್ಕಿರುವ ಬಲಿಷ್ಠ ಪುರಾವೆ ಇದಾಗಿದೆ.
ಆಡಿಯೋ ಕ್ಲಿಪ್ ಪ್ಲೇ ಮಾಡುವುದಕ್ಕೂ ಮುನ್ನ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, 26/11ರ ದಾಳಿಯಲ್ಲಿ ಭಾರತೀಯ ಪೊಲೀಸ್ ಪಡೆಗಳ 18 ಸದಸ್ಯರು, ತಾಜ್ ಹೋಟೆಲ್ನ12 ಮಂದಿ ಸಿಬ್ಬಂದಿ ಮತ್ತು ಭದ್ರತಾ ಸಿಬಂದಿ ಹುತಾತ್ಮರಾಗಿದ್ದಾರೆ. ಅವರ ಶೌರ್ಯ ಮತ್ತು ಸಂಕಲ್ಪಕ್ಕೆ ನಾವು ತಲೆಬಾಗುತ್ತೇವೆ. ಅಂದು ನಡೆದ ದಾಳಿ ಕೇವಲ ಮುಂಬೈ ಮೇಲೆ ನಡೆದ ದಾಳಿಯಲ್ಲ. ಅಂತಾರಾಷ್ಟ್ರೀಯ ಸಮುದಾಯದ ಮೇಲೆ ನಡೆದ ದಾಳಿ ಅದು ಎಂದರು.
ಭಯೋತ್ಪಾದಕರ ವಿರುದ್ದ ಅಂತಾರಾಷ್ಟ್ರೀಯ ಸಮುದಾಯ ಸದಾ ಗಟ್ಟಿಯಾಗಿ ನಿಲ್ಲುತ್ತದೆ ಎಂಬ ಸಂದೇಶವನ್ನು ನಾವೆಲ್ಲರೂ ಒಟ್ಟು ಸೇರಿ ರವಾನಿಸಬೇಕು ಎಂದು ವಿಶ್ವಸಂಸ್ಥೆಯ ಸದಸ್ಯರನ್ನುದ್ದೇಶಿಸಿ ಸಚಿವ ಜೈಶಂಕರ್ ಹೇಳಿದರು.