ಚೆನ್ನೈ, ಅ 28 (DaijiworldNews/DB): ಹೊಸದಾಗಿ ಕಟ್ಟಿಸಿದ ಮನೆಗೆ ದುಷ್ಟಶಕ್ತಿಗಳು ತಾಗದಿರಲೆಂದು ಹುಂಜವನ್ನು ಬಲಿಕೊಡಲು ಹೊರಟ ವೃದ್ದ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಆದರೆ ಬಲಿಕೊಡಬೇಕಿದ್ದ ಹುಂಜ ಅವರ ಮೇಲೆಯೇ ಬಿದ್ದರೂ ಅದೃಷ್ಟವಶಾತ್ ಜೀವವುಳಿಸಿಕೊಂಡಿದೆ.
ಚೆನ್ನೈಯ ಪಲ್ಲವರಂ ಎಂಬಲ್ಲಿ ಪಲ್ಲಾವರಂನ ಪೊಜಿಚಲೂರಿನ ಟಿ ಲೋಕೇಶ್ ಅವರಮೂರು ಅಂತಸ್ತಿನ ಅಪಾರ್ಟ್ಮೆಂಟ್ಗೆ ದುಷ್ಟಶಕ್ತಿಗಳು ತಾಗದಿರಲೆಂದು ಮೇಸ್ತ್ರಿ 70 ವರ್ಷದ ರಾಜೇಂದ್ರನ್ ಎಂಬ ವೃದ್ದ ಹುಂಜವೊಂದನ್ನು ಬಲಿಕೊಡಲು ಮುಂದಾಗಿದ್ದರು. ಅದಕ್ಕಾಗಿ ಅವರು ಆ ಕಟ್ಟಡದ ಮೂರನೇ ಮಹಡಿಯನ್ನು ಪ್ರವೇಶಿಸಿ ಅಲ್ಲಿ ತೆರೆದ ಲಿಫ್ಟ್ ಶಾಫ್ಟ್ಗೆ ಕಾಲಿಟ್ಟರು. ಆಗ ಅವರು ಅಲ್ಲಿಂದ ಕೆಳಗೆ ಬಿದ್ದಿದ್ದು, ಅವರ ಮೇಲೆ ಹುಂಜವೂ ಬಿದ್ದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ರಾಜೇಂದ್ರನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದರು. ಆದರೆ ಬಲಿ ಕೊಡಬೇಕಿದ್ದ ಹುಂಜ ರಾಜೇಂದ್ರನ್ ಅವರ ಮೇಲೆ ಬಿದ್ದಿದ್ದು, ಯಾವುದೇ ಗಾಯಗಳಿಲ್ಲದೆ ಬದುಕುಳಿದಿದೆ.
ಗೃಹಪ್ರವೇಶಕ್ಕೂ ಮುನ್ನ ವಿಧಿ ವಿಧಾನಗಳನ್ನು ನೆರವೇರಿಸಬೇಕಿದ್ದ ಹಿನ್ನೆಲೆಯಲ್ಲಿ ಕೋಲಿ ಕುತ್ತಿಗೆ ಸೀಳಲು ರಾಜೇಂದ್ರನ್ ತೆರೆದ ಸ್ಥಳಕ್ಕೆ ಹೋಗಿರಬಹುದು. ಈ ವೇಳೆ ಸಿಮೆಂಟ್ ಮತ್ತು ತಂತಿಗಳು ಮನೆಯಲ್ಲಿ ತುಂಬಿದ್ದರಿಂದ ಕಾಲು ಜಾರಿ ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.