ಅಲಿಗಢ, ಅ 28 (DaijiworldNews/DB): ಮದುವೆ ಆರತಕ್ಷತೆ ಊಟದಲ್ಲಿ ರಸಗುಲ್ಲಾ ಬಡಿಸಲಿಲ್ಲವೆಂದು ವಧು-ವರರ ಕಡೆಯ ಯುವಕರ ನಡುವೆ ಹೊಡೆದಾಟ ನಡೆದು, ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಆಗ್ರಾದಲ್ಲಿ ನಡೆದಿದೆ.
ಉಸ್ಮಾನ್ ಅಹ್ಮದ್ ಎಂಬವರ ಇಬ್ಬರು ಪುತ್ರಿಯರು ಮತ್ತು ವಾಕರ್ ಅಹ್ಮದ್ ಎಂಬವರ ಪುತ್ರರ ವಿವಾಹ ಆರತಕ್ಷತೆ ಬುಧವಾರ ರಾತ್ರಿ ನಡೆದಿತ್ತು. ಈ ವೇಳೆ ಊಟದಲ್ಲಿ ರಸಗುಲ್ಲಾ ಬಡಿಸಲಿಲ್ಲ ಎಂಬ ವಿಚಾರವಾಗಿ ಎರಡೂ ಕಡೆಯ ಅತಿಥಿಗಳ ನಡುವೆ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೇರಿ ಖಂಡೌಲಿ ಮೂಲದ 20 ವರ್ಷದ ಸನ್ನಿ ಎಂಬ ಯುವಕನೊಬ್ಬನನ್ನುಚೂರಿ ಇರಿದು ಕೊಲೆ ಮಾಡಲಾಗಿದೆ.
ಇನ್ನು ಘಟನೆ ಕುರಿ ತುಎಟ್ಮಾಡ್ಪುರದ ಎಸ್ಎಚ್ಒ ಸರ್ವೇಶ್ ಕುಮಾರ್ ಮಾಹಿತಿ ನೀಡಿದ್ದು, ಎರಡೂ ಕಡೆಯ ಯುವಕರು ಪರಸ್ಪರ ತಟ್ಟೆ, ಕುರ್ಚಿಗಳನ್ನು ಎಸೆದುಕೊಂಡಿದ್ದಾರೆ. ಸನ್ನಿ ಎಂಬಾತನಿಗೆ ಚೂರಿಯಿಂದ ಇರಿಯಲಾಗಿದ್ದು, ಕೂಡಲೇ ಾತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ. ಗಲಾಟೆಯಲ್ಲಿ ಭಾಗಿಯಾದ ಹಲವರನ್ನು ಈಗಗಾಗಲೇ ಬಂಧಿಸಲಾಗಿದೆ. ಎಸ್ಪಿ (ಗ್ರಾಮೀಣ) ಸತ್ಯಜೀತ್ ಗುಪ್ತಾ ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದವರು ಹೇಳಿದ್ದಾರೆ.