ನವದೆಹಲಿ, ಅ 28 (DaijiworldNews/DB): ಒಂದು ಸಣ್ಣ ಸುಳ್ಳು ಸುದ್ದಿ ಇಡೀ ದೇಶದಲ್ಲಿ ಬಿರುಗಾಳಿ ಎಬ್ಬಿಸಲು ಕಾರಣವಾಗಬಹುದು. ಸುದ್ದಿ, ವೀಡಿಯೋಗಳನ್ನು ಫಾರ್ವರ್ಡ್ ಮಾಡುವ ಮೊದಲು ಸತ್ಯಾಸತ್ಯತೆ ಅರಿತುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಸಲಹೆ ಮಾಡಿದ್ದಾರೆ.
ಹರ್ಯಾಣದ ಸೂರಜ್ ಕುಂಡ್ನಲ್ಲಿ ವಿವಿಧ ರಾಜ್ಯಗಳ ಗೃಹ ಸಚಿವರ ಚಿಂತನ್ ಶಿವಿರ್ನ್ನು (ಶಿಬಿರ) ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಶುಕ್ರವಾರ ಮಾತನಾಡಿದರು.
ಯಾವುದೇ ಸುದ್ದಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆ ಪರಾಮರ್ಶಿಸಬೇಕು. ಅಲ್ಲದೆ ಅದನ್ನು ಬೇರೆಯವರಿಗೆ ಕಳುಹಿಸಬಹುದೇ ಎಂಬ ಬಗ್ಗೆ ಯೋಚಿಸಬೇಕು. ಯಾವುದೇ ಸುದ್ದಿಗಳನ್ನು ಸತ್ಯವೆಂದು ನಂಬುವ ಮೊದಲು ಯೋಚಿಸುವಂತೆ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವೂ ಇದೆ. ಒಂದು ಸುಳ್ಳು ಸುದ್ದಿಯಿಂದ ದೇಶಾದ್ಯಂತ ಬಿರುಗಾಳಿಯೇ ಏಳುವ ಸಾಧ್ಯತೆಗಳಿರುವುದರಿಂದ ಜನ ಇಂತಹ ವಿಚಾರಗಳಲ್ಲಿ ಅತಿ ಹೆಚ್ಚು ಜಾಗರೂಕತೆ ವಹಿಸಬೇಕು ಎಂದರು.
ಅಪರಾಧ ಜಗತ್ತಿಗಿಂತ ದೇಶದ ಕಾನೂನು ಏಜೆನ್ಸಿಗಳು ಸದಾ ಒಂದು ಹೆಜ್ಜೆ ಮುಂದಿರಬೇಕು. ಕಾನೂನು ಪಾಲಿಸುವ ನಾಗರಿಕರ ಸುರಕ್ಷತೆ ನಮ್ಮ ಧ್ಯೇಯ. ಹಕ್ಕುಗಳಿಗಾಗಿ ವಿಧ್ವಂಸಕ ಕೃತ್ಯ ಎಸಗುವ ಶಕ್ತಿಗಳ ವಿರುದ್ದ ಕಠಿಣ ಕ್ರಮ ಅಗತ್ಯ ಎಂದವರು ಪ್ರತಿಪಾದಿಸಿದರು.