ತಿರುವನಂತಪುರ, ಅ 28 (DaijiworldNews/MS): ದಾನ-ಧರ್ಮದ ನೆಪದಲ್ಲಿ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳು ಸಂಪತ್ತನ್ನು ಸಂಗ್ರಹಿಸುತ್ತಿದ್ದು, ಇಂಥ ಸಂಸ್ಥೆಗಳ ಚಟುವಟಿಕೆಗಳನ್ನು ನಿಯಂತ್ರಿಸಲು ದೇಶದಾದ್ಯಂತ ಅನ್ವಯವಾಗುವ ಕಠಿಣವಾದ ಕೇಂದ್ರೀಯ ಕಾನೂನಿನ ಅಗತ್ಯವಿದೆ ಎಂದು ಕೇರಳ ಹೈಕೋರ್ಟ್ ಗುರುವಾರ ಹೇಳಿದೆ.
2018ರ ಚರ್ಚ್ ಹಗರಣಕ್ಕೆ ಸಂಬಂಧಿಸಿದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪಿ ಸೋಮರಾಜನ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ವೇಳೆ ಈ ಅಭಿಪ್ರಾಯ ನೀಡಿದೆ.
"ಆಸ್ತಿ ಮತ್ತು ಸಂಪತ್ತು ಸಂಗ್ರಹಿಸಲು 'ದಾನ' ಎಂಬ ಪದವನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಆದರೆ ಅಪಾರ ಪ್ರಮಾಣದ ಆಸ್ತಿ ಮತ್ತು ಸಂಪತ್ತನ್ನು ದಾನದ ಹೆಸರಿನಲ್ಲಿ ವಶಪಡಿಸಿಕೊಳ್ಳುತ್ತಿರುವಾಗ ಇದು ಯಾವುದೇ ಕಾನೂನಿನ ಮಾನ್ಯತೆಗೆ ಒಳಪಡಬಾರದು ಎಂದಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ದತ್ತಿ ಸಂಸ್ಥೆಗಳು ಮತ್ತು ಅವುಗಳ ಕೆಲಸವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಶಾಸನ ರೂಪಿಸುವ ಅಗತ್ಯವಿದೆ ಎಂದು ಕೋರ್ಟ್ ಹೇಳಿದೆ.