ಹರ್ಯಾಣ, ಅ 28 (DaijiworldNews/HR): ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಕೇಂದ್ರ ಗೃಹ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿಗದಿತ ಸಮಯ ಮೀರಿ ದೀರ್ಘ ಭಾಷಣ ಮಾಡಿದ್ದಕ್ಕೆ ವೇದಿಕೆಯಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕಾರ್ಯಕ್ರಮದಲ್ಲಿ ಸಚಿವ ಅನಿಲ್ ವಿಜ್ ಗೆ ಮಾತನಾಡಲು ಕೇವಲ ಐದು ನಿಮಿಷಗಳ ಕಾಲಾವಕಾಶ ನಿಗದಿಪಡಿಸಲಾಗಿತ್ತು. ಆದರೆ ಅನಿಲ್ ವಿಜ್ ಎಂಟೂವರೆ ನಿಮಿಷಗಳ ಕಾಲ ಭಾಷಣ ಮುಂದುವರಿಸಿದ ಸಂದರ್ಭದಲ್ಲಿ ಅಮಿತ್ ಶಾ ನಾಲ್ಕು ಬಾರಿ ಭಾಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಇನ್ನು ಭಾಷಣ ಶೀಘ್ರವೇ ಕೊನೆಗೊಳಿಸುವಂತೆ ಅಮಿತ್ ಶಾ ಚೀಟಿ ಕಳುಹಿಸಿದ್ದರು. ಆದರೂ ವಿಜ್ ಭಾಷಣ ಮುಂದುವರಿಸಿದಾಗ, ಶಾ ಮೈಕ್ ಹಿಡಿದು ಭಾಷಣ ನಿಲ್ಲಿಸುವಂತೆ ವಿಜ್ ಗೆ ಸೂಚನೆ ನೀಡಿದ್ದರು. ಆದರೆ ಸಚಿವ ವಿಜ್ ಮತ್ತೆ ಭಾಷಣ ಮುಂದುವರಿಸಿದ್ದು, ಅನಿಲ್ ಜೀ ನಿಮಗೆ ಕೇವಲ ಐದು ನಿಮಿಷ ಸಮಯ ನಿಗದಿಪಡಿಸಲಾಗಿದೆ, ಆದರೂ ನೀವು ಈಗಾಗಲೇ ಎಂಟೂವರೆ ನಿಮಿಷ ಮಾತನಾಡಿದ್ದೀರಿ ದಯವಿಟ್ಟು ನಿಮ್ಮ ಭಾಷಣ ಮುಕ್ತಾಯಗೊಳಿಸಿ, ಇದು ದೀರ್ಘ ಭಾಷಣ ಮಾಡುವ ವೇದಿಕೆಯಲ್ಲ ಎಂದಿದ್ದಾರೆ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.