ತೆಲಂಗಾಣ, ಅ 28 (DaijiworldNews/DB): ಟಿಆರ್ಎಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಂತೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಎರಡೂ ನಮಗೆ ಒಂದೇ. ಇವೆರಡೂ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ದವಾಗಿದ್ದು, ಹಣ ರಾಜಕೀಯದಲ್ಲೇ ಕಾಲ ಕಳೆಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಟಿಆರ್ಎಸ್ ಮತ್ತು ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದ್ದು, ಸರ್ಕಾರಗಳನ್ನು ಉರುಳಿಸುವುದೇ ಅವರ ಕೆಲಸವಾಗಿದೆ. ಶಾಸಕರನ್ನು ಹಣ ನೀಡಿ ಖರೀಸುವುದೇ ಆ ಪಕ್ಷಗಳ ಉದ್ದೇಶ ಎಂದರು.
ಹಣ ಮತ್ತು ಗುತ್ತಿಗೆಯ ಆಮಿಷವೊಡ್ಡಿ ಬಿಜೆಪಿ ಶಾಸಕರ ಭೇಟೆಯಾಡುವ ಪ್ರಯತ್ನ ಮಾಡುತ್ತಿದೆ ಎಂದು ಟಿಆರ್ಎಸ್ ಆರೋಪಿಸಿದೆ. ಶಾಸಕರ ಮಾಹಿತಿಯನ್ವಯ ಸೈಬರಾಬಾದ್ ಪೊಲೀಸರು ರಂಗಾ ರೆಡ್ಡಿಯ ಫಾರ್ಮ್ಹೌಸ್ನಲ್ಲಿ ಮೂವರನ್ನು ಬುಧವಾರ ಸಂಜೆ ಬಂಧಿಸಿದ್ದರು. ಇನ್ನು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಸೈಬರಾಬಾದ್ ಪೊಲೀಸರು ಮಾಡಿದ ಮನವಿಯನ್ನು ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನ್ಯಾಯಾಲಯ ತಿರಸ್ಕರಿಸಿದೆ. ಈ ನಡುವೆ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಕೋರಿ ಬಿಜೆಪಿ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದೆ.