ಚೆನ್ನೈ, ಅ 28 (DaijiworldNews/MS): ತಮಿಳುನಾಡಿನ ಬಿಜೆಪಿ ನಾಯಕಿಯರ ಬಗ್ಗೆ ತಮ್ಮ ಪಕ್ಷದ ವಕ್ತಾರ ಸೈದಾಯಿ ಸಾದಿಕ್ ಮಾಡಿರುವ ಅವಹೇಳನಕಾರಿ ಹೇಳಿಕೆಗೆ ಡಿಎಂಕೆ ನಾಯಕಿ ಕನಿಮೊಳಿ ಅವರು ಗುರುವಾರ ಕ್ಷಮೆಯಾಚಿಸಿದ್ದಾರೆ.
ಬಿಜೆಪಿಯ ಮಹಿಳಾ ನಾಯಕಿಯರಾದ ಖುಷ್ಬು ಸುಂದರ್, ನಮಿತಾ, ಗೌತಮಿ ಮತ್ತು ಗಾಯತ್ರಿ ರಘುರಾಮ್ ಅವರನ್ನು ‘ಐಟಂ’ಗಳು ಎಂದು ಕರೆದಿದ್ದ ಸಾದಿಕ್ ಮತ್ತಷ್ಟು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು.
ಈ ವಿಷಯವಾಗಿ ಟ್ವೀಟ್ ಮಾಡಿದ್ದ ಖುಷ್ಬು, ‘ಮಹಿಳೆಯರನ್ನು ಅವಮಾನಿಸುವುದು ‘ಹೊಸ ದ್ರಾವಿಡ ಮಾದರಿ’ಯ ಭಾಗವೇ ಎಂದು ಪ್ರಶ್ನೆ ಮಾಡಿದ್ದರು.ಇದೇ ಟ್ವೀಟ್ ಅನ್ನು ಕನಿಮೋಳಿ ಅವರಿಗೂ ಟ್ಯಾಗ್ ಮಾಡಿದ್ದಾರೆ.
ಈ ಹೇಳಿಕೆ ವಿವಾದವಾಗುತ್ತಿದ್ದಂತೆಯೇ ಡಿಎಂಕೆ ಮಹಿಳಾ ವಿಭಾಗದ ಕಾರ್ಯದರ್ಶಿಯೂ ಆಗಿರುವ ಕನಿಮೋಳಿ ತಕ್ಷಣವೇ ಕ್ಷಮೆಯಾಚಿಸಿದ್ದಾರೆ. ‘ನಾನೊಬ್ಬ ಮಹಿಳೆಯಾಗಿ ಮತ್ತು ಮನುಷ್ಯಳಾಗಿ ಅವರ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ಇದನ್ನು ಯಾರೇ ಹೇಳಿದ್ದರೂ ಸಹಿಸಲು ಸಾಧ್ಯವಿಲ್ಲ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ. ನನ್ನ ನಾಯಕ ಸ್ಟಾಲಿನ್ ಮತ್ತು ನನ್ನ ಪಕ್ಷ ಡಿಎಂಕೆ ಇದನ್ನು ಎಂದೂ ಕ್ಷಮಿಸುವುದಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.
ಬಿಜೆಪಿಯ ಮಹಿಳಾ ನಾಯಕಿಯರನ್ನು ‘ಐಟಂ’ ಎಂದು ಕರೆದಿದ್ದಲ್ಲದೆ, ಕೇಸರಿ ಪಕ್ಷವು ತಮಿಳುನಾಡಿಗೆ ಕಾಲಿಡಲು ಈ "ನಟಿಯರ" ಮೇಲೆ ಮಾತ್ರ ಅವಲಂಬಿತವಾಗಿದೆ ಸಾದಿಕ್ ಲೇವಡಿ ಮಾಡಿದ್ದರು.