ಹರಿಯಾಣ, ಅ 28 (DaijiworldNews/MS): 2024ರ ಮೊದಲು ಎಲ್ಲಾ ರಾಜ್ಯದಲ್ಲಿ ರಾಷ್ಟ್ರೀಯ ತನಿಖಾ ದಳದ ಶಾಖಾ ಕಚೇರಿ ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಹರಿಯಾಣದ ಸೂರಜ್ಕುಂಡದಲ್ಲಿ ಆರಂಭವಾದ ಎರಡು ದಿನಗಳ 'ಚಿಂತನ ಶಿಬಿರ'ದಲ್ಲಿ ಮಾತನಾಡಿದ ಸಚಿವ ಅಮಿತ್ ಶಾ,ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಗೆಲುವು ಸಾಧಿಸಲು, ಕಾನೂನು ಚೌಕಟ್ಟನ್ನು ಬಲಪಡಿಸಲಾಗುತ್ತಿದೆ, ಅದರ ಅಡಿಯಲ್ಲಿ ಎನ್ಐಎ ಮತ್ತು ಯುಎಪಿಎ ಕಾನೂನುಗಳಿಗೆ ತಿದ್ದುಪಡಿ ಮಾಡುವ ಮೂಲಕ ವ್ಯಕ್ತಿಯನ್ನು ವೈಯಕ್ತಿಕವಾಗಿ ಭಯೋತ್ಪಾದಕ ಎಂದು ಘೋಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾ ತಿಳಿಸಿದ್ದಾರೆ.
ಅಲ್ಲದೆ ಗಡಿಯಲ್ಲಿನ ಭಯೋತ್ಪಾದನೆ, ಸೈಬರ್ ಕ್ರೈಂ, ಡ್ರಗ್ ವ್ಯವಹಾರ ನಿಯಂತ್ರಣ, ದೇಶದ್ರೋಹದಂಥ ಪ್ರಕರಣಗಳ ನಿರ್ವಹಣೆ ಹಾಗೂ ತ್ವರಿತ ವಿಚಾರಣೆಗೆ ಎಲ್ಲಾ ರಾಜ್ಯಗಳಲ್ಲೂ ಎನ್ಐಎ ಶಾಖಾ ಕಚೇರಿ ತೆರೆಯಲಾಗುವುದು. ಗಡಿ ಭದ್ರತೆ ಮತ್ತು ಕರಾವಳಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಗಡಿ ರಾಜ್ಯಗಳು ಕೇಂದ್ರದ ತನಿಖಾ ದಳ ಮತ್ತು ಭದ್ರತಾ ಪಡೆಗಳೊಂದಿಗೆ ಹೆಚ್ಚು ಸಂಘಟಿತ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ
.
ಸೈಬರ್ ಕ್ರೈಮ್ ಇಂದು ರಾಷ್ಟ್ರ ಮತ್ತು ಜಗತ್ತಿಗೆ ದೊಡ್ಡ ಅಪಾಯವಾಗಿದೆ ಎಂದ ಅವರು ಗೃಹ ಸಚಿವಾಲಯವು ಅದರ ವಿರುದ್ಧ ಹೋರಾಡಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.