ಬೆಂಗಳೂರು, ಅ 27 (DaijiworldNews/MS): ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯ ಯಶಸ್ವಿನ ಉತ್ಸಾಹದಲ್ಲಿ ತೇಲುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರು , ರಾಜ್ಯಾದ್ಯಂತ ಟ್ರ್ಯಾಕ್ಟರ್ ಯಾತ್ರೆ ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡ ಕೆ.ಸಿ ವೇಣುಗೋಪಾಲ್ ನೇತೃತ್ವದಲ್ಲಿ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ನಾಯಕರ ಟ್ರ್ಯಾಕ್ಟರ್ ಯಾತ್ರೆಗೆ ಹೈಕಮಾಂಡ್ ಸಮ್ಮಿತಿ ಸೂಚಿಸಿದೆ. ನವೆಂಬರ್ ನಲ್ಲಿ ಈ ಯಾತ್ರೆ ಆರಂಭಗೊಳ್ಳುವ ಸಾಧ್ಯತೆ ಇದ್ದು, ಕಡಿಮೆ ಅವಧಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವನ್ನು ತಲುಪುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ದಕ್ಷಿಣ ಕರ್ನಾಟಕದಲ್ಲಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ 2 ಟ್ರ್ಯಾಕ್ಟರ್ ಯಾತ್ರೆ ನಡೆಯಲಿದೆ ಎಂದು ತಿಳಿದುಬಂದಿದೆ.
ಯಾತ್ರೆ ಹಾಗೂ ಅದರ ಆರಂಭದ ದಿನಾಂಕದ ಬಗ್ಗೆ ಶೀಘ್ರ ಅಧಿಕೃತ ಘೋಷಣೆಯಾಗಲಿದೆ. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ, ಮೋದಿ ಸರ್ಕಾರದ ವೈಫಲ್ಯಗಳು ಸೇರಿದಂತೆ ಹಲವು ಪ್ರಾದೇಶಿಕ ಸಮಸ್ಯೆ ಮುಂದಿಟ್ಟುಕೊಂಡು ಯಾತ್ರೆಯಲ್ಲಿ ಜನರ ಗಮನ ಸೆಳೆಯಲು ಕಾಂಗ್ರೆಸ್ ನಾಯಕರು ಯೋಜನೆ ಹಾಕಿಕೊಂಡಿದ್ದಾರೆ.