ತೆಲಂಗಾಣ, ಅ 27 (DaijiworldNews/MS): ದೀಪಾವಳಿ ಹಬ್ಬದ ಬಿಡುವಿನ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಯೂ ಇಂದು ಬೆಳಗ್ಗೆ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಕ್ತಾಲ್ನಿಂದ ಪುನರಾರಂಭಗೊಂಡಿದೆ.
ತೆಲಂಗಾಣದಲ್ಲಿ ಇದು ಯಾತ್ರೆಯ ಎರಡನೇ ದಿನವಾಗಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ.ರೇವಂತ್ ರೆಡ್ಡಿ, ಸಂಸದ ಉತ್ತಮ್ ಕುಮಾರ್ ರೆಡ್ಡಿ, ಸಿಎಲ್ಪಿ ನಾಯಕ ಭಟ್ಟಿ ವಿಕ್ರಮಾರ್ಕ ಮತ್ತು ಪಕ್ಷದ ಹಲವಾರು ಮುಖಂಡರು ರಾಹುಲ್ ಅವರೊಂದಿಗೆ ಬೆಳಿಗ್ಗೆ 6.30ಕ್ಕೆಮಕ್ತಾಲ್ನಿಂದ ಯಾತ್ರೆ ಯಲ್ಲಿ ಹೆಜ್ಜೆ ಹಾಕಿದರು.
ಅಕ್ಟೋಬರ್ 23 ರಂದು ಬೆಳಿಗ್ಗೆ ಕರ್ನಾಟಕದ ರಾಯಚೂರಿನಿಂದ ನಿರ್ಗಮಿಸಿ, ಗುಡೆಬೆಳ್ಳೂರು ಮೂಲಕ ತೆಲಂಗಾಣವನ್ನು ಪ್ರವೇಶಿಸಿತ್ತು. ಆ ಬಳಿಕ ದೀಪಾವಳಿ ಬಿಡುವಿನ ಹಿನ್ನಲೆ ರಾಹುಲ್ ಗಾಂಧಿ ದೆಹಲಿಗೆ ಪ್ರಯಾಣಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತೆಲಂಗಾಣದಲ್ಲಿ ಒಟ್ಟು 16 ದಿನಗಳ ಕಾಲ ಯಾತ್ರೆ ಸಾಗಲಿದೆ. ಈ ಅವಧಿಯಲ್ಲಿ 19 ವಿಧಾನಸಭಾ ಕ್ಷೇತ್ರಗಳು ಮತ್ತು 7 ಲೋಕಸಭಾ ಕ್ಷೇತ್ರಗಳ ಒಟ್ಟು 375 ಕಿ.ಮೀ ಹಾದಿಯನ್ನು ಯಾತ್ರೆ ಕ್ರಮಿಸಲಿದೆ. ನವೆಂಬರ್ 7ರಂದು ಮಹಾರಾಷ್ಟ್ರ ಪ್ರವೇಶಿಸಲಿದೆ.