ಗಾಜಿಯಾಬಾದ್, ಅ 26 (DaijiworldNews/DB): ವಾಹನ ಪಾರ್ಕಿಂಗ್ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ದೆಹಲಿಯ ಗಾಜಿಯಾಬಾದ್ನಲ್ಲಿ ನಡೆದಿದೆ.
ಗಾಜಿಯಾಬಾದ್ ಉಪಾಹಾರ ಗೃಹದ ಹೊರಭಾಗದ ಪಾರ್ಕಿಂಗ್ ಸ್ಥಳದಲ್ಲಿ ಮಂಗಳವಾರ ರಾತ್ರಿ ಪಕ್ಕದ ಕಾರಿನ ಡೋರ್ ತೆರೆಯಲಾಗದ ರೀತಿಯಲ್ಲಿ ಅದರ ಪಕ್ಕದಲ್ಲಿ ಇನ್ನೊಂದು ಕಾರನ್ನು ನಿಲ್ಲಿಸಲಾಗಿತ್ತು. ಈ ವಿಚಾರವಾಗಿ ಕಾರು ಚಾಲಕ ವರುಣ್ ಮತ್ತು ಇನ್ನೊಂದು ಕಾರಿನಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ತಾರಕ್ಕೇರಿ ಇಬ್ಬರ ನಡುವೆ ಹೊಡೆದಾಟ ನಡೆದಿದ್ದು, ವರುಣ್ ಮೇಲೆ ಮಾರಣಾಂತಕ ಹಲ್ಲೆ ನಡೆಸಲಾಗಿದೆ. ಅಲ್ಲದೆ ಆತನಿಗೆ ಇನ್ನೊಂದು ಕಾರಿನಲ್ಲಿದ್ದವರು ಇಟ್ಟಿಗೆಯಿಂದ ಹೊಡೆದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಗಾಜಿಯಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗಳ ಪತ್ತೆಗಾಗಿ ಐದು ತಂಡಗಳು ಶೋಧ ಕಾರ್ಯ ನಡೆಸುತ್ತಿವೆ.
ಡೈರಿ ವ್ಯಾಪಾರ ನಡೆಸುತ್ತಿದ್ದ ವರುಣ್ ಉಪಾಹಾರ ಗೃಹದ ಪಕ್ಕದಲ್ಲೇ ವಾಸಿಸುತ್ತಿದ್ದರು. ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ. ರಾತ್ರಿ ಉಪಾಹಾರಗೃಹದ ಹೊರಗೆ ವರುಣ್ ಕಾರು ನಿಲ್ಲಿಸಿದ್ದು, ಪಕ್ಕದ ಕಾರಿನ ಬಾಗಿಲು ತೆರೆಯಲಾಗದ ರೀತಿ ನಿಲ್ಲಿಸಿದ್ದರು. ಇದೇ ವಾಗ್ವಾದಕ್ಕೆ ಕಾರಣವಾಗಿದ್ದು, ಗಲಾಟೆಯಿಂದ ವರುಣ್ ಜೀವ ಕಳೆದುಕೊಳ್ಳುವಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.