ನವದೆಹಲಿ, ಅ 26 (DaijiworldNews/DB): ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಿಸುವ ಸಲುವಾಗಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ 'ರೆಡ್ ಲೈಟ್ ಆನ್.. ಗಾಡಿ ಆಫ್' ಎಂಬ ಹೊಸ ಅಭಿಯಾನ ಆರಂಭಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯದ ಮಟ್ಟ ಅಪಾಯಕಾರಿಯಾಗಿರುವುದರಿಂದ ವಾಯುಮಾಲಿನ್ಯ ತಗ್ಗಿಸಲು ಅಲ್ಲಿನ ಸರ್ಕಾರ ಹಲವಾರು ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಹಿಂದೆ ಸಮ-ಬೆಸ ಪದ್ದತಿ ಜಾರಿಗೊಳಿಸಿ ಒಂದು ದಿನ ಸಮ ಸಂಖ್ಯೆಯ ವಾಹನ ಮತ್ತು ಇನ್ನೊಂದು ದಿನ ಬೆಸ ಸಂಖ್ಯೆ ನೋಂದಣಿ ವಾಹನಗಳನ್ನು ಓಡಿಸಲು ನಿಯಮ ರೂಪಿಸಲಾಗಿತ್ತು. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಸುವುದನ್ನೂ ನಿಷೇಧಿಸಲಾಗಿತ್ತು. ಈ ಎಲ್ಲಾ ಕ್ರಮಗಳ ಹೊರತಾಗ್ಯೂ ಅಲ್ಲಿ ವಾಯುಮಾಲಿನ್ಯದ ಪ್ರಮಾಣ ಏರಿಕೆಯಾಗುತ್ತಲೇ ಇದೆ.
ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ 15 ಅಂಶಗಳ ಯೋಜನೆಯನ್ನು ರೂಪಿಸಲಾಗಿದೆ. ಅದರಂತೆ 'ರೆಡ್ ಲೈಟ್ ಆನ್.. ಗಾಡಿ ಆಫ್' ಎಂಬ ಹೊಸ ಅಭಿಯಾನ ಆರಂಭಿಸಲಾಗಿದ್ದು, ಟ್ರಾಫಿಕ್ ಸಿಗ್ನಲ್ ಬಳಿ ಕೆಂಪು ದೀಪ ಬಿದ್ದ ಕೂಡಲೇ ಗಾಡಿ ಎಂಜಿನ್ ಸ್ವಿಚ್ ಆಫ್ ಮಾಡುವಂತೆ ಸೂಚಿಸಲಾಗಿದೆ. ಇದರಿಂದ ವಾಯುಮಾಲಿನ್ಯದ ಪ್ರಮಾಣ ಶೇಕಡಾ 15-20 ರಷ್ಟು ಕಡಿಮೆಯಾಗಬಹುದು ಎಂಬ ನಿರೀಕ್ಷೆ ಸರ್ಕಾರದ್ದು.
ಇನ್ನು ಈ ಹೊಸ ಅಭಿಯಾನಕ್ಕೆ ಜನರನ್ನು ಸಿದ್ದಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಇದಕ್ಕೆಂದೇ ಕೆಲವು ಸ್ವಯಂ ಸೇವಕರು ತೊಡಗಿಸಿಕೊಂಡಿದ್ದಾರೆ. ಸಿಗ್ನಲ್ ಬಳಿ ವಾಹನ ಸವಾರರಿಗೆ ಗುಲಾಬಿ ಹೂವು ನೀಡಿ ವಾಹನಗಳ ಎಂಜಿನ್ ಆಫ್ ಮಾಡುವಂತೆ ಪ್ರಚುರಪಡಿಸುತ್ತಿದ್ದಾರೆ.