ಗುರುಗ್ರಾಮ್, ಅ 26 (DaijiworldNews/DB): ಎನ್ಎಸ್ಜಿ ಕಮಾಂಡೋವೊಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕೆ ನಾಲ್ವರ ಗುಂಪೊಂದು ಹಲ್ಲೆ ನಡೆಸಿದ ಗಟನೆ ದೆಹಲಿ ಗುರುಗ್ರಾಮ್ನಲ್ಲಿ ನಡೆದಿದೆ. ಘಟನೆ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಮನೇಸರ್ನ ರಾಷ್ಟ್ರೀಯ ಭದ್ರತಾ ಸಿಬಂದಿ (ಎನ್ ಎಸ್ ಜಿ) ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉತ್ತರಪ್ರದೇಶ ಮೂಲದ ಚುನ್ನು ಅನ್ಸಾರಿ ಅವರು ಕೆಲವು ಆಹಾರ ಸಾಮಾಗ್ರಿಗಳ ಖರೀದಿಗೆಂದು ಸೆಕ್ಟರ್ 80ರ ಫಾಸ್ಟ್ ಫುಡ್ ಔಟ್ಲೆಟ್ಗೆ ಹೋಗಿದ್ದರು. ಔಟ್ಲೆಟ್ನಿಂದ ಅವರು ಹೊರ ಬಂದಾಗ ನಾಲ್ವರು ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದು, ಈ ವೇಳೆ ಅನ್ಸಾರಿ ಕಾರು ತೆಗೆಯುವಂತೆ ಹೇಳಿದ್ದಾರೆ. ಆದರೆ ಕುಡಿದ ಅಮಲಿನಲ್ಲಿದ್ದ ನಾಲ್ವರು ಈ ವೇಳೆ ಅನ್ಸಾರಿ ಅವರ ಮೇಳೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕೊಲೆ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ವರದಿಯಾಗಿದೆ.
ಘಟನೆ ಸಂಬಂಧ ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆ 323 ಮತ್ತು ಸೆಕ್ಷನ್ 506ರ ಅನ್ವಯ ಎಫ್ ಐಆರ್ ದಾಖಲಿಸಲಾಗಿದೆ.