ಮುಂಬೈ, ಅ 26 (DaijiworldNews/DB): ಯುವಕನೊಬ್ಬ ಬಾಲ್ಕನಿಗಳನ್ನು ಗುರಿಯಾಗಿಸಿಕೊಂಡು ರಾಕೆಟ್ಗಳನ್ನು ಬಿಟ್ಟ ಘಟನೆ ಉಲ್ಲಾಸನಗರ (ಪೂರ್ವ)ದ ಶಹಾದ್ ಪ್ರದೇಶದ ಗೋಲ್ ಮೈದಾನದ ಬಳಿ ನಡೆದಿದೆ.
ಮುಂಬೈ ಸಮೀಪದ ಉಲ್ಲಾಸ್ ನಗರದಲ್ಲಿರುವ ಹೀರಾ ಪನ್ನ ಎತ್ತರದ ಕಟ್ಟಡದ ಬಾಲ್ಕನಿಗಳ ಮೇಲೆ ಈತ ರಾಕೆಟ್ ಹಾರಿಸಿದ್ದಾನೆ. ಕೆಲವು ಪಟಾಕಿಗಳು ಗೋಡೆ ಮತ್ತು ಹವಾ ನಿಯಂತ್ರಿತ ಹೊರಾಂಗಣ ಘಟಕಗಳಿಗೆ ರಾಕೆಟ್ ಅಪ್ಪಳಿಸಿದೆ. ಅಲ್ಲದೆ ಕೆಲವು ಬಾಲ್ಕನಿಗಳು ಬಾಗಿಲು ತೆರೆದಿದ್ದು, ನೇರವಾಗಿ ಮನೆಯೊಳಗೇ ಹೋಗಿವೆ ಎನ್ನಲಾಗಿದೆ.
ಇನ್ನು ಯುವಕ ಮೋಜಿಗಾಗಿ ರಾಕೆಟ್ ಬಿಟ್ಟಿದ್ದಾನೆ ಎಂದೂ ಹೇಳಲಾಗುತ್ತಿದೆ. ಆದರೆ ಈತ ಉದ್ದೇಶಪೂರ್ವಕವಾಗಿಯೇ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿದ್ದಾನೆ ಎಂಬುದಾಗಿ ಕೆಲವರು ಆರೋಪಿಸಿದ್ದು, ಆತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಈತನ ವಿರುದ್ದ ಐಪಿಸಿ ಸೆಕ್ಷನ್ 285 (ಬೆಂಕಿ ಅಥವಾ ದಹನಕಾರಿ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ), 286 (ಸ್ಫೋಟಕ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ) ಮತ್ತು 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಥಾಣೆ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ