ಜಮ್ಮು, ಅ 26 (DaijiworldNews/DB): ಉಗ್ರರ ದಾಳಿ ಭೀತಿಯಿಂದಾಗಿ 10 ಕಾಶ್ಮೀರಿ ಪಂಡಿತರ ಕುಟುಂಬಗಳು ಊರು ತೊರೆದ ಘಟನೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೌಧರಿಗುಂಡ್ ಗ್ರಾಮದಲ್ಲಿ ನಡೆದಿದೆ. ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಇತ್ತೀಚೆಗೆ ಉಗ್ರರು ನಡೆಸುತ್ತಿರುವ ದಾಳಿಯಿಂದ ಆತಂಕಗೊಂಡು ಈ ಕುಟುಂಬಗಳು ಹುಟ್ಟೂರು ತೊರೆದಿವೆ.
ಕಳೆದ ಅಕ್ಟೋಬರ್ 15ರಂದು ಚೌಧರಿಗುಂಡ್ ಗ್ರಾಮದಲ್ಲಿ ಕಾಶ್ಮೀರಿ ಪಂಡಿತ್ ಪುರಾನ್ ಕೃಷ್ಣನ್ ಭಟ್ ಹಾಗೂ ಅಕ್ಟೋಬರ್ 18ರಂದು ಕಾಶ್ಮೀರಿ ಪಂಡಿತರಾದ ಮೋನಿಶ್ ಕುಮಾರ್ ಮತ್ತು ರಾಮ್ ಸಾಗರ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು. ಉಗ್ರರು ನಿರಂತರವಾಗಿ ಕಾಶ್ಮೀರಿ ಪಂಡಿತರನ್ನು ಕೊಲೆ ಮಾಡುತ್ತಿರುವುದರಿಂದ ಇಲ್ಲಿನ ಕುಟುಂಬಗಳು ಜೀವಭಯದಲ್ಲೇ ಬದುಕುತ್ತಿವೆ. 35-40 ಸದಸ್ಯರಿರುವ 10 ಕಾಶ್ಮೀರಿ ಪಂಡಿತರ ಕುಟುಂಬಗಳು ಊರು ತೊರೆದಿವೆ. ಪ್ರಸ್ತುತ ಈ ಗ್ರಾಮವೇ ಖಾಲಿಯಾಗಿದೆ ಎಂದು ಉಗ್ರರಿಂದ ಕೊಲೆ ಬೆದರಿಕೆ ಎದುರಿಸುತ್ತಿರುವ ಚೌಧರಿಗುಂಡ್ ನಿವಾಸಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
1990ರ ಅವಧಿಯಲ್ಲಿ ಉಗ್ರರ ಕೃತ್ಯಗಳು ಹೆಚ್ಚಿದ್ದಂತಹ ವೇಳೆಯೂ ಅದೇ ಗ್ರಾಮದಲ್ಲಿ ಜೀವನ ಸಾಗಿಸಿದ್ದ ಕಾಶ್ಮೀರಿ ಪಂಡಿತರ ಪೈಕಿ ಕೆಲವರಿಗೆ ಇತ್ತೀಚಿನ ಕೆಲ ದಾಳಿಗಳಿಂದಾಗಿ ಆತಂಕ ಹೆಚ್ಚಾಗಿದೆ. ಇದಕ್ಕಾಗಿ ಅವರೆಲ್ಲರೂ ಊರು ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಎಂದವರು ಹೇಳಿದ್ದಾರೆ.
ಪ್ರತಿದಿನ ಜೀವಭಯದಲ್ಲೇ ದಿನದೂಡಬೇಕಾದ ಪರಿಸ್ಥಿತಿ ಇದೆ. ಬದುಕಿ ಉಳಿಯುವ ಧೈರ್ಯ ಯಾರಿಗೂ ಇಲ್ಲದಾಗಿದೆ. ಭದ್ರತೆ ನಮಗೆ ಇಲ್ಲದಾಗಿದೆ. ನಿರಂತರವಾಗಿ ರಕ್ಷಣೆಗೆ ಮನವಿ ಮಾಡಿದರೂ ರಕ್ಷಣೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದ್ದಾರೆ.