ತಮಿಳುನಾಡು, ಅ 26 (DaijiworldNews/DB): ಕೊಯಮತ್ತೂರಿನಲ್ಲಿ ನಡೆದ ಕಾರು ಸ್ಪೋಟ ಪ್ರಕರಣದ ಸಂಬಂಧ ಐವರು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ದೀಪಾವಳಿಗೂ ಒಂದು ದಿನ ಮುಂಚಿತವಾಗಿ ಕಾರು ಸ್ಪೋಟ ಸಂಭವಿಸಿತ್ತು. ಬಳಿಕ ಸ್ಪೋಟದಲ್ಲಿ ಮೃತಪಟ್ಟ ಜಮೇಜಾ ಮುಬಿನ್ (25) ಬಗ್ಗೆ ವಿಚಾರಣೆ ನಡೆಸಿದಾಗ ಆತನಿಗೆ ಭಯೋತ್ಪಾದಕರ ಸಂಬಂಧವಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಆತನ ಮನೆಗೆ ಎನ್ಐಎ ದಾಳಿ ನಡೆಸಿತ್ತು.
ಅಲ್ಲದೆ ಮನೆಯಿಂದ 50 ಕೆಜಿ ಅಮೋನಿಯಂ ನೈಟ್ರೈಟ್, ಪೊಟಾಶಿಯಂ, ಸೋಡಿಯಂ, ಪ್ಯೂಸ್ ವೈರ್, ಏಳು- ವೋಲ್ಟ್ ಬ್ಯಾಟರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಐವರನ್ನು ನಗರ ಪೊಲೀಸರು ಬಂಧಿಸಿದ್ದು, ಭಯೋತ್ಪಾದನಾ-ವಿರೋಧಿ ಕಾನೂನಿನ (ಯುಎಪಿಎ) ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಇದೀಗ ಎಲ್ಲಾ ಐದು ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.