ಬೆಂಗಳೂರು, ಅ 26 (DaijiworldNews/MS): ಕರ್ನಾಟಕದಲ್ಲಿ ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ನೆರೆ ರಾಜ್ಯ ಮಹಾರಾಷ್ಟ್ರದಲ್ಲಿಓಮಿಕ್ರಾನ್ ಹೊಸ ರೂಪಾಂತರಿ ತಳಿ ಪತ್ತೆಯಾಗಿರುವುದರಿಂದ ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಟ್ಟೆಚ್ಚರ ವಹಿಸಿದ್ದು ಈ ಹಿನ್ನಲೆಯಲ್ಲಿ ಕೆಲವು ಸೂಚನೆ ನೀಡಿದೆ.
ಕೋವಿಡ್ 19ನ ಬಿಎ. 2.75 ಹಾಗೂ ಬಿಜೆ.1 ನ ಪುರ್ನಸಂಯೋಜಿತ , ಓಮಿಕ್ರಾನ್ BQ.1 ಹೊಸ ಉಪರೂಪಾಂತರಿ ತಳಿಯು ನೆರೆಯ ಮಹಾರಾಷ್ಟ್ರ ಪತ್ತೆಯಾಗಿದೆ. ಎರಡು ರೂಪಾಂತರಗಳಿಂದ ಕೋವಿಡ್ನ ರೀತಿಯಲ್ಲಿಯೇ ಸೋಂಕು ಹರಡುತ್ತದೆ ಎಂದು ತಿಳಿದುಬಂದಿದೆ. ಹೀಗಾಗಿ ದೀಪಾವಳಿ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಜನರಿಗೆ ತಿಳಿಸಿದೆ.
ಆರೋಗ್ಯ ಇಲಾಖೆಯು ತನ್ನ ಪ್ರಕಟಣೆಯಲ್ಲಿ, “ಸಾರ್ವಜನಿಕರು ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು ಅಥವಾ ಉಸಿರಾಟದ ಸಂಬಂಧಿತ ಸಮಸ್ಯೆಯ ಯಾವುದೇ ಲಕ್ಷಣಗಳು ಕಂಡುಬಂದರೆ ಸ್ಥಳೀಯ ಆಸ್ಪತ್ರೆಗೆ ಹೋಗಿ ರ್ಯಾಪಿಡ್ ಆಂಟಜೆನ್, ಟೆಸ್ಟಿಂಗ್ ಮಾಡಿಸಿಕೊಳ್ಳಬೇಕು, ನೆಗೆಟಿವ್, ಫಲತಾಂಶ ಬಂದಲ್ಲಿ ಆರ್ಟಿ ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಸೋಂಕು ಕಡಿಮೆಯಾಗುವವರೆಗೆ ಅವರು ಸ್ವಯಂಪ್ರೇರಣೆಯಿಂದ ಮನೆಯೊಳಗೆ ಇರಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಫೇಸ್ ಮಾಸ್ಕ್ ಬಳಸಿದರೆ ಉತ್ತಮ. ಹಬ್ಬದ ದಿನಗಳಲ್ಲಿ ಅಂತರ ಕಾಯ್ದುಕೊಳ್ಳಿ. ಎರಡು ಡೋಸ್ ಲಸಿಕೆಗಳನ್ನು ತೆಗೆದುಕೊಂಡವರು, ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದೆ.