ಬೆಂಗಳೂರು, ಅ 25 (DaijiworldNews/MS): ಕಾಂತಾರ ಸಿನಿಮಾ ಜತೆ ಜತೆಗೆ ಚಿತ್ರದ ಹಾಡುಗಳು ಕೂಡ ಜನಮನ ಗೆದ್ದಿವೆ. ಅದರಲ್ಲೂ ‘ವರಾಹ ರೂಪಂ..’ ಗೀತೆಯನ್ನು ಕೇಳಿ ಜನರು ತಲೆದೂಗಿದ್ದಾರೆ. ಆದರೆ ಈ ಹಾಡಿನ ಮೇಲೆ ಕೃತಿಚೌರ್ಯದ ಆರೋಪ ಕೇಳಿಬಂದಿದೆ.
ತಮ್ಮ ಹಾಡನ್ನು ಕೃತಿಚೌರ್ಯ ಮಾಡಲಾಗಿದೆ ಎಂದು ಆರೋಪಿಸಿರುವ ಜನಪ್ರಿಯ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್, ‘ಕಾಂತಾರ’ ಸಿನಿಮಾ ರಚನೆಕಾರರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದೆ.
ಆಡಿಯೋದಲ್ಲಿ ನಮ್ಮ ನವರಸಂ ಮತ್ತು ವರಾಹ ರೂಪಂ ಹಾಡುಗಳ ನಡುವೆ ಅನಿವಾರ್ಯ ಹೋಲಿಕೆಗಳಿರುವುದರಿಂದ ಹಕ್ಕುಸ್ವಾಮ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಥೈಕ್ಕುಡಂ ಬ್ರಿಡ್ಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
‘ಹಾಡಿನ ಹಕ್ಕುಗಳನ್ನು ಕುರಿತಂತೆ ಕಾಂತಾರ ತಂಡದವರು ನಮಗೆ ಯಾವುದೇ ಕ್ರಿಡಿಟ್ ನೀಡಿಲ್ಲ ಹಾಗೂ ಈ ಹಾಡನ್ನು ತಮ್ಮ ಸ್ವಂತ ಸೃಷ್ಟಿ ಎಂಬಂತೆ ಪ್ರಚಾರ ಮಾಡಿಕೊಳ್ಳಲಾಗಿದೆ. ಹೀಗಾಗಿ ನಮಗೆ ಎಲ್ಲರ ಬೆಂಬಲ ಬೇಕು. ಮ್ಯೂಸಿಕ್ ಕಾಪಿ ರೈಟ್ ಉಳಿಸುವ ಬಗ್ಗೆ ಎಲ್ಲ ಸಂಗೀತ ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ’ ಎಂದು ‘ತೈಕ್ಕುಡಂ ಬ್ರಿಡ್ಜ್’ ತಂಡ ಪೋಸ್ಟ್ ಮಾಡಿದೆ.