ನವದೆಹಲಿ, ಅ 25 (DaijiworldNews/MS): ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಜನರು ದೀಪಾವಳಿಯ ರಾತ್ರಿ, ನಿಷೇಧವನ್ನು ಧಿಕ್ಕರಿಸಿ ಪಟಾಕಿ ಸಿಡಿಸಿದ್ದರಿಂದ ದೆಹಲಿಯ ಗಾಳಿಯ ಗುಣಮಟ್ಟ ಇಂದು ಬೆಳಿಗ್ಗೆ 'ಅತ್ಯಂತ ಕಳಪೆ ಮಟ್ಟಕ್ಕೆ'ಗೆ ತಿರುಗಿದೆ ಎಂದು ವರದಿಯಾಗಿದೆ.
ದೀಪಾವಳಿಯ ರಾತ್ರಿಯ ಉದ್ದಕ್ಕೂ ಪಟಾಕಿಗಳ ಸದ್ದು ಜೋರಾಗಿ ಕೇಳಿಬಂದಿದ್ದು, ಜನರು ಮುಸ್ಸಂಜೆಯ ಹೊತ್ತಿಗೆ ಪಟಾಕಿ ಸಿಡಿಸಲಾರಂಭಿಸಿದರು, ರಾತ್ರಿಯಾಗುತ್ತಿದ್ದಂತೆ ಪಟಾಕಿಗಳ ಕಾವು ಹೆಚ್ಚಾಗಿತ್ತು.
ಅನುಮತಿ ಇರುವ ಡೆಸಿಬಲ್ ಮಿತಿಯನ್ನು ಉಲ್ಲಂಘಿಸಿದ ಕಾರಣ ವಾಯು ಮಾಲಿನ್ಯ , ಶಬ್ದ ಮಾಲಿನ್ಯ ಹೆಚ್ಚಾಗಿತ್ತು.
ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (AQI) ಇಂದು ಬೆಳಿಗ್ಗೆ 6 ಗಂಟೆಗೆ 323 ರಷ್ಟಿತ್ತು. ನೆರೆಯ ಗುರುಗ್ರಾಮ್, ನೋಯ್ಡಾ ಮತ್ತು ಫರಿದಾಬಾದ್ನಲ್ಲಿಯೂ ಗಾಳಿಯ ಗುಣಮಟ್ಟವು 'ಅತ್ಯಂತ ಕಳಪೆ' ಮಟ್ಟಕ್ಕೆ ಕುಸಿದಿದೆ.
ಪರಿಸರ ಕಾಳಜಿ ಮತ್ತು ಆರೋಗ್ಯದ ಅಪಾಯಗಳನ್ನು ಪರಿಗಣಿಸಿದ ನಂತರ ದೆಹಲಿ ಸರ್ಕಾರವು ಈ ದೀಪಾವಳಿಯಲ್ಲಿ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಿತ್ತು. ನಿಷೇಧವನ್ನು ಉಲ್ಲಂಘಿಸಿ ಸಿಕ್ಕಿಬಿದ್ದವರಿಗೆ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಕಳೆದ ವಾರ, ಮಾಲಿನ್ಯವನ್ನು ಉಲ್ಲೇಖಿಸಿ ದೆಹಲಿಯಲ್ಲಿ ಪಟಾಕಿ ನಿಷೇಧವನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.