ನವದೆಹಲಿ, ಅ 24 (DaijiworldNews/DB): ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಹಸಿವಿನ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಕಾಂಗ್ರೆಸ್ನ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಸೋಮವಾರ ಮಾತನಾಡಿದ ಅವರು, ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ಕುಸಿಯುತ್ತಿದೆ. ಸಂಸ್ಥೆಗಳು ನೀಡುವ ವರದಿಯನ್ನು ತಿರಸ್ಕರಿಸದೆ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ನೀಗಿಸಲು ಸರ್ಕಾರ ಮುಂದಾಗಬೇಕು ಎಂದರು.
ವಾರ್ಷಿಕ ಜಾಗತಿಕ ಹಸಿವು ಸೂಚ್ಯಂಕದ ಪಟ್ಟಿಯು ಪಕ್ಷಪಾತ ಮತ್ತು ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಹೇಳಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ತಪ್ಪಾದ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹೇಳಿದ್ದು, ಇದಕ್ಕೆ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಲಿನ ಮೇಲಿನ ವಿಜಯದ ಸಂಕೇತವಾಗಿ ಹಾಗೂ ಅಜ್ಞಾನ ತೊಡೆದು ಹಾಕಿ ಜ್ಞಾನದ ಬೆಳಕಿನೆಡೆಗೆ ಸಾಗುವ ಸಂದೇಶವನ್ನು ದೀಪಾವಳಿ ಸಾರುತ್ತದೆ. ಹೊಸ ಭರವಸೆ, ಹೊಸ ಕನಸುಗಳೊಂದಿಗೆ ಜೀವನ ರೂಪಿಸುವ ಅವಕಾಶ ಇದು ಎಂದವರು ಇದೇ ವೇಳೆ ದೀಪಾವಳಿಯ ಶುಭಾಶಯ ಕೋರಿದರು.