ನವದೆಹಲಿ, ಅ 24 (DaijiworldNews/DB): ನಿಲ್ಲಿಸಿದ ಎಸ್ಯುವಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರಿನಲ್ಲಿದ್ದ ವ್ಯಕ್ತಿ ಸಜೀವದಹನಗೊಂಡ ಘಟನೆ ಅಲಿಪುರ್ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದು, ಅದರೊಳಗೆ ವ್ಯಕ್ತಿ ಕುಳಿತಿದ್ದ. ಈ ವೇಳೆ ನಿಲ್ಲಿಸಿದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೆಲವು ಬಟ್ಟೆಗಳನ್ನು ಘಟನಾ ಸ್ಥಳದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ದೇವೇಶ್ ಕುಮಾರ್ ಮಹಾಲಾ ತಿಳಿಸಿದ್ದಾರೆ.
ವ್ಯಕ್ತಿಯ ದೇಹ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕೇವಲ ಮೂಳೆಗಳು ಉಳಿದುಕೊಂಡಿವೆ. ನಂಬರ್ ಪ್ಲೇಟ್ ಸಹಾಯದಿಂದ ವಾಹನದ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಲಾಗಿದೆ. ಕುರುಕ್ಷೇತ್ರದ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಕಾರು ನೋಂದಾವಣೆಯಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿರುವುದಾಗಿ ವರದಿಯಾಗಿದೆ.