ಶಿವಮೊಗ್ಗ, ಅ 24 (DaijiworldNews/DB): ಅನ್ಯಕೋಮಿನ ವ್ಯಕ್ತಿಯೊಬ್ಬನ ಕಾರು ಜಖಂಗೊಳಿಸಿದ ಆರೋಪದ ಮೇರೆಗೆ ಶಿವಮೊಗ್ಗದ ಹರ್ಷ ಸಹೋದರಿ ಅಶ್ವಿನಿ ಸೇರಿದಂತೆ ಸುಮಾರು 15 ಮಂದಿ ವಿರುದ್ದ ಎಫ್ಐಆರ್ ದಾಖಲಾಗಿದೆ.
ಆಜಾದ್ ನಗರದಲ್ಲಿ ಸಯ್ಯದ್ ಪರ್ವೀಜ್ ಎಂಬುವರ ಇನ್ನೋವಾ ಕಾರಿಗೆ ಹಾನಿ ಮಾಡಲಾಗಿದೆ ಎಂಬುದಾಗಿ ಅವರು ದೂರು ದಾಖಲಿಸಿದ್ದರು. ಕಲ್ಲಪ್ಪನಕೇರಿಯಿಂದ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಕೇಸರಿ ಬಾವುಟ ಹಿಡಿದುಕೊಂಡು ಗುಂಪೊಂದು ಬೈಕ್ಗಳಲ್ಲಿ ಬಂದಿದ್ದು, ಕಾರಿಗೆ ಹಾನಿ ಮಾಡಿದ್ದಾರೆ. ಕಾರಿನ ಎಡ ಭಾಗದ ಹೆಡ್ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್ಗಳನ್ನು ಹಾನಿ ಮಾಡಿ ಜಖಂಗೊಳಿಸಿದ್ದಾರೆ ಎಂದು ಪರ್ವೀಜ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಹಿಂದೂ ಕಾರ್ಯಕರ್ತ ಹರ್ಷನ ಸಹೋದರಿ ಅಶ್ವಿನಿ ಸೇರಿ ಸುಮಾರು 10-15 ಮಂದಿಯ ವಿರುದ್ದ ಎಫ್ಐಆರ್ ದಾಖಲು ಮಾಡಲಾಗಿದೆ.