ಚೆನ್ನೈ, ಅ 24 (DaijiworldNews/DB): ಮಳೆ ನೀರು ಹರಿದು ಹೋಗಲು ತೋಡಿದ್ದ ಚರಂಡಿ ಹೊಂಡಕ್ಕೆ ಬಿದ್ದು ಯುವ ಪತ್ರಕರ್ತರೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ನಡೆದಿದೆ.
ಪುತಿಯಾ ತಲೈಮುರೈ ಎಂಬ ತಮಿಳು ಸುದ್ದಿವಾಹಿನಿಯ ಡಿಜಿಟಲ್ ವಿಭಾಗದ ವಿಷಯ ಸಂಪಾದಕ ಎಸ್. ಮುತ್ತುಕೃಷ್ಣನ್ (25 ) ಸಾವನ್ನಪ್ಪಿದ ಪತ್ರಕರ್ತ. ಶನಿವಾರ ರಾತ್ರಿ ಕೆಲಸ ಮುಗಿಸಿ ಕಚೇರಿಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಅಶೋಕನಗರದ ಚಿತ್ರಮಂದಿರವೊಂದರ ಬಳಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಲಾಗುತ್ತಿತ್ತು. ಇದೇ ಮಾರ್ಗದಲ್ಲಿ ಬಂದ ಮುತ್ತುಕೃಷ್ಣನ್ ಗುಂಡಿಯನ್ನು ದಾಟಿ ಮುಂದೆ ಹೋಗಲು ಒಂದು ಬದಯಿಂದ ಇನ್ನುಂದು ಬದಿಗೆ ಹಾರುವಾಗ ಕಾಲು ಜಾರಿ ಚರಂಡಿಯೊಳಗೆ ಬಿದ್ದಿದ್ದಾರೆ. ಈ ವೇಳೆ ಕೂಡಲೇ ಅವರು ಹೊಂಡದಿಂದ ಮೇಲೆ ಎದ್ದು ಸ್ನೇಹಿತರಿಗೆ ಕರೆ ಮಾಡಿ ಬಿದ್ದ ವಿಷಯವನ್ನು ತಿಳಿಸಿದ್ದಾರೆ. ಆದರೆ ಬಳಿಕ ಅವರು ಅಸ್ವಸ್ಥರಾಗಿದ್ದು, ಸ್ನೇಹಿತರು ಸ್ಥಳೀಯ ಕ್ಲಿನಿಕ್ಗೆ ಕರೆದೊಯ್ದಿದ್ದಾರೆ.
ಕ್ಲಿನಿಕ್ನಲ್ಲಿ ಅವರನ್ನು ತಪಾಸಣೆ ನಡೆಸಿದ ವೈದ್ಯರು ಸ್ಕ್ಯಾನಿಂಗ್ ಸೌಲಭ್ಯ ಇರುವ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಹೀಗಾಗಿ ರೋಯಪೆಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಸಂಜೆ ಅವರು ಸಾವನ್ನಪ್ಪಿದರು ಎಂದು ಪೊಲೀಸರು ವಿವರಿಸಿದ್ದಾರೆ.
ಬಾಹ್ಯವಾಗಿ ಯಾವುದೇ ಗಾಯ, ರಕ್ತಸ್ರಾವ ಕಂಡು ಬಂದಿಲ್ಲ. ಆದರೆ ದೇಹಸ್ಥಿತಿ ಕ್ಷೀಣಿಸಿ ಬಳಿಕ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿರುವುದಾಗಿ ವರದಿಯಾಗಿದೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.