ಜಗಪುರ (ಒಡಿಶಾ), ಅ 24 (DaijiworldNews/DB): ಆಹಾರದ ಗುಣಮಟ್ಟ ಮತ್ತು ಬೆಲೆಯ ವಿಚಾರವಾಗಿ ಗಲಾಟೆ ಮಾಡಿದ ಗ್ರಾಹಕನಿಗೆ ಹೊಟೇಲ್ ಮಾಲಕ ಬಿಸಿ ಎಣ್ಣೆ ಸುರಿದ ಘಟನೆ ಒಡಿಶಾದ ಜಗಪುರ ಜಿಲ್ಲೆಯಲ್ಲಿ ನಡೆದಿದೆ.
ಬಲಿಚಂದ್ರಪುರ ಗ್ರಾಮದ ನಿವಾಸಿ ಪ್ರಸಂಜೀತ್ ಪರೀದಾ (48) ಗಾಯಗೊಂಡವರು. ತೀವ್ರ ಸುಟ್ಟ ಗಾಯಗಳೊಂದಿಗೆ ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಲಕ ಪ್ರವಾಕರ್ ಸಾಹೂ ಅವರ ಮೇಲೆ ದೂರು ದಾಖಲಾಗಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿನ ಹೊಟೇಲ್ನಲ್ಲಿ ಆಹಾರ ಸೇವಿಸಿದ ಪ್ರಸಂಜೀತ್ ಅದರ ಗುಣಮಟ್ಟ ಚೆನ್ನಾಗಿಲ್ಲವೆಂದು ಮಾಲಕರಲ್ಲಿ ಜಗಳ ಮಾಡಿದ್ದಾರೆ. ಈ ವೇಳೆ ಬೆಲೆ ಮತ್ತು ಗುಣಮಟ್ಟದ ವಿಷಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಮಾಲಕ ಸಾಹೂ ಕುದಿಯುವ ಎಣ್ಣೆಯನ್ನು ತಂದು ಗ್ರಾಹಕ ಪ್ರಸಂಜೀತ್ ಮೇಲೆ ಸುರಿದಿದ್ದಾನೆ ಎಂದು ತಿಳಿದು ಬಂದಿದೆ. ಪರಿಣಾಮವಾಗಿ ಗ್ರಾಹಕನ ಮುಖ, ಕತ್ತು, ಎದೆ ಮತ್ತು ಹೊಟ್ಟೆ ಹಾಗೂ ಕೈಗಳಿಗೆ ಎಣ್ಣೆ ತಾಗಿ ತೀವ್ರ ಸುಟ್ಟ ಗಾಯಗಳಾಗಿವೆ. ಕೂಡಲೇ ಗಾಯಾಳುವನ್ನು ಕಟಕ್ನ ಎಸ್ಬಿಸಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ಬಲಿಚಂದ್ರಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಮಾಕಾಂತ ಮುದುಲಿ ಹೇಳಿರುವುದಾಗಿ ವರದಿಯಾಗಿದೆ.