ಲಕ್ನೋ, ಅ 23 (DaijiworldNews/SM): ಪ್ರಧಾನಿ ನರೇಂದ್ರ ಮೋದಿ ಅವರು ಬೆಳಕಿನ ಹಬ್ಬ ದೀಪಾವಳಿಗೂ ಒಂದು ದಿನ ಮೊದಲೇ ಅಯೋಧ್ಯೆಯಲ್ಲಿ ಭಾನುವಾರ ಅದ್ಧೂರಿ ದೀಪೋತ್ಸವದಲ್ಲಿ ಪಾಲ್ಗೊಂಡು ರಾಮ್ ಲಲ್ಲಾ ದರ್ಶನ ಪಡೆದರು. ವಿಶೇಷ ಪೂಜೆ ನೆರವೇರಿದ ನಂತರ ಪ್ರಧಾನಿಗಳು ಅಯೋಧ್ಯೆ ರಾಮಮಂದಿರ ನಿರ್ಮಾಣ ಕುರಿತು ಪರಿಶೀಲನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಹೆಚ್ಚಿಸಲಾಗಿತ್ತು. ಭಾನುವಾರ ಸಂಖ್ಯೆ ಅಯೋಧ್ಯೆ ಆವರಣ ಲಕ್ಷಾಂತರ ದೀಪಗಳಿಂದ ಕಂಗೊಳಿಸಿತ್ತು. ರಾಮಕಥಾ ಉದ್ಯಾನವನ್ನು ಹೂ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಇದೆಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವದಲ್ಲಿ ಪಾಲ್ಗೊಂಡರು.
ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಆರತಿ, ಪೂಜೆ ಅರ್ಪಿಸಿ ಆಶೀರ್ವಾದ ಪಡೆದ ನಂತರ ಪ್ರಧಾನಿ ನರೇಂದ್ರ ಮೋದಿ ರಾಮಮಂದಿರದ ನಕ್ಷೆ ಕುರಿತು ವೀಕ್ಷಿಸಿದರು. ಬಳಿಕ ಅಧಿಕಾರಿಗಳ ಜೊತೆಗೆ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರವನ್ನು ಪರಿಶೀಲಿಸಿ ಮಾಹಿತಿ ಪಡೆದರು. ನಂತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ರಾಜ ರಾಮನ ಪ್ರತಿಷ್ಠಾಪನೆಯ ಮಹತ್ತರ ಸೌಭಾಗ್ಯವು ರಾಮಜಿಯ ಕೃಪೆಯಿಂದ ದೊರೆತಿದೆ. ಭಗವಾನ್ ಶ್ರೀರಾಮನನ್ನು ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಿದಾಗ ಶ್ರೀರಾಮನ ತತ್ವಾದರ್ಶಗಳು, ಮೌಲ್ಯಗಳು ದೃಢವಾಗಿ ನಿಂತಿವೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಘಳಿಗೆಯಲ್ಲಿ ಭಗವಾನ್ ರಾಮನಂತಹ ಇಚ್ಛಾಶಕ್ತಿಯು ದೇಶವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರೇರೆಪಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಭಾರತದಲ್ಲಿ ಸಬ್ಕಾ ಸಾಥ್-ಸಬ್ಕಾ ವಿಕಾಸ್ ಪ್ರಯತ್ನದಲ್ಲಿ ಭಗವಾನ್ ಶ್ರೀರಾಮನ ಆಲೋಚನೆಗಳು, ಭಗವಂತ ಆಡಳಿತ ಮೌಲ್ಯಗಳು, ಉದ್ದೇಶ ಕ್ರೋಢಿಕರಣಗೊಂಡಿದೆ. ಸರ್ಕಾರದ ಯೋಜನೆಗಳಿಂದ ದೇಶ ಮಹತ್ವ ಹೆಜ್ಜೆ ಇಡುತ್ತಿದೆ ಎಂದರು.