ನವದೆಹಲಿ, ಅ 23 (DaijiworldNews/DB): ವಿದೇಶಗಳಿಂದ ದೇಣಿಗೆ ಸಂಗ್ರಹಣೆ ವೇಳೆ ನಿಯಮ ಉಲ್ಲಂಘನೆ ಮಾಡಿರುವ ಆರೋಪದಲ್ಲಿ ರಾಜೀವ್ ಗಾಂಧಿ ಫೌಂಡೇಶನ್ ಸಂಸ್ಥೆಗೆ ನೀಡಿದ್ದ ಪರವಾನಿಗೆಯನ್ನು ಕೇಂದ್ರ ಗೃಹ ಇಲಾಖೆ ರದ್ದಗೊಳಿಸಿದೆ.
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ರಾಜೀವ್ ಗಾಂಧಿ ಫೌಂಡೇಶನ್ ಸಂಸ್ಥೆಗೆ ಪರವಾನಿಗೆ ನೀಡಲಾಗಿತ್ತು. ಆದರೆ ಪ್ರತಿಷ್ಠಾನದ ಕಾರ್ಯನಿರ್ವಹಣೆ ಸಂಬಂಧಿಸಿ ಪರಿಶೀಲನೆಗಾಗಿ ಕೇಂದ್ರ ಗೃಹ ಇಲಾಖೆಯು 2020ರ ಜುಲೈಯಲ್ಲಿ ಸಮಿತಿಯೊಂದನ್ನು ರಚನೆ ಮಾಡಿತ್ತು. ಇದೀಗ ಸಮಿತಿಯು ವರದಿ ನೀಡಿದ್ದು, ವರದಿಯಲ್ಲಿ ವಿದೇಶಗಳಿಂದ ದೇಣಿಗೆ ಸಂಗ್ರಹಣೆ ವೇಲೆ ನಿಯಮ ಉಲ್ಲಂಘನೆ ಮಾಡಿರುವುದನ್ನು ಉಲ್ಲೇಖಿಸಲಾಗಿದೆ. ಸಮಿತಿಯ ವರದಿಯನ್ನಾಧರಿಸಿ ಕೇಂದ್ರ ಗೃಹ ಇಲಾಖೆಯು ಪ್ರತಿಷ್ಠಾನದ ಪರವಾನಿಗೆಯನ್ನು ರದ್ದು ಮಾಡಿದ್ದು, ಈಗಾಗಲೇ ಈ ಕುರಿತು ಪ್ರತಿಷ್ಠಾನದ ಕಾರ್ಯಕಾರಿ ಸಮಿತಿಗೆ ಮಾಹಿತಿ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಗಾಂಧಿ ಕುಟುಂಬದೊಂದಿಗೆ ಈ ಪ್ರತಿಷ್ಠಾನ ನಿಕಟ ಸಂಬಂಧ ಹೊಂದಿದ್ದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದರು. ಪ್ರತಿಷ್ಠಾನದ ವಿಶ್ವಸ್ಥರಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಸಂಸದರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕಾರ್ಯ ನಿರ್ವಹಿಸುತ್ತಿದ್ದರು.