ಪಿಲಿಭಿತ್, ಅ 23 (DaijiworldNews/DB): ಪತಿಯ ಸ್ನೇಹಿತರು ಮತ್ತು ಮಲಮಗನಿಂದ ನಿರಂತರ ಅತ್ಯಾಚಾರಕ್ಕೊಳಗಾಗಿ ನೊಂದಿರುವ ಮಹಿಳೆಯೊಬ್ಬರು ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
30 ವರ್ಷದ ಸಂತ್ರಸ್ತ ಮಹಿಳೆಯು ತಾನು ನ್ಯಾಯದ ಭರವಸೆಯನ್ನೇ ಕಳೆದುಕೊಂಡಿದ್ದು, ನನಗೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ಕೋರಿದ್ದಾರೆ. ಆರೋಪಿಗಳ ಬಂಧನಕ್ಕೆ ನ್ಯಾಯಾಲಯ ಆದೇಶಿಸಿದೆ. ಅಕ್ಟೋಬರ್ 9ರಂದು ಪುರನ್ಪುರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆದರೆ ಆರೋಪಿಗಳನ್ನು ಉದ್ದೇಶಪೂರ್ವಕವಾಗಿಯೇ ಪೊಲೀಸರು ಬಂಧಿಸುತ್ತಿಲ್ಲ. ನನಗೆ ನಿರಂತರವಾಗಿ ಜೀವ ಬೆದರಿಕೆ ಬರುತ್ತಿದ್ದು, ನನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮೌನವಾಗಿರುವಂತೆ ಹೇಳುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಹಲವು ಹೋರಾಟಗಳ ನಂತರ ನನಗೆ ನ್ಯಾಯ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ದಯಾಮರಣವೊಂದೇ ನನಗೆ ದಾರಿಯಾಗಿದ್ದು, ಅದಕ್ಕೆ ಅನುಮತಿ ನೀಡಿ ಎಂದು ಕೋರಿದ್ದಾರೆ.
ಮೊದಲ ಪತಿಯಿಂದ ವಿಚ್ಚೇದನ ಪಡೆದ ಬಳಿಕ ಚಂಡೀಗಢದ 55 ವರ್ಷದ ವಿಚ್ಛೇದಿತ ರೈತನೊಬ್ಬನನ್ನು ಮಹಿಳೆ ವಿವಾಹವಾಗಿದ್ದರು. ಆ ಬಳಿಕ ಆಕೆಯ ಮಲಮಗ ನಿರಂತರವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಆ ಬಳಿಕ ಗರ್ಭಿಣಿಯಾಗಿದ್ದು, ಡಿಎನ್ಎ ಪರೀಕ್ಷೆಗೆ ಹೋಗಲು ಮುಂದಾದಾಗ ನನ್ನ ಹೊಟ್ಟೆಗೆ ಹೊಡೆದು ಬಲವಂತದಿಂದ ಗರ್ಭಪಾತ ಮಾಡಿಸಿದ್ದಾರೆ ಎಂದವರು ದೂರಿದ್ದಾರೆ.
ಜುಲೈ 18ರಂದು ಪತಿಯ ಸ್ನೇಹಿತನ ಫಾರ್ಮ್ಹೌಸ್ಗೆ ಕರೆದೊಯ್ದು ಆತನ ಸಂಬಂಧಿ ಮತ್ತಿಬ್ಬರು ಸಹದ್ಯೋಗಿಗಳು ನನ್ನ ಮೇಲೆ ಅತ್ಯಾಚಾರ ಎಸಗಿದರು. ಪೊಲೀಸರಿಗೆ ಈ ಸಂಬಂಧ ದೂರು ನೀಡಿದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬಳಿಕ ನ್ಯಾಯಾಲಯಕ್ಕೆ ಹೋದೆ. ಆನಂತರ ಕೊತ್ವಾಲಿ ಪೊಲೀಸರು ಪತಿ ಮತ್ತು ಮಲಮಗ ಸೇರಿದಂತೆ ಐವರ ವಿರುದ್ಧ ಐಪಿಸಿ ಸೆಕ್ಷನ್ 376-ಡಿ (ಗ್ಯಾಂಗ್-ರೇಪ್), 323 (ಗಾಯಗೊಳಿಸುವುದು), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರೂ, ಆರೋಪಿಗಳನ್ನು ಬಂಧಿಸುವಲ್ಲಿ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಆಪಾದಿಸಿದ್ದಾರೆ.