ಅಮರಾವತಿ ಅ 23 (DaijiworldNews/DB): ಪಟಾಕಿ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಕಾರ್ಮಿಕರು ಸಜೀವದಹನಗೊಂಡ ಘಟನೆ ವಿಜಯವಾಡದಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಮೂರು ಅಂಗಡಿಗಳಿಗೆ ಬೆಂಕಿ ತಗುಲಿದ್ದು ಸುಟ್ಟು ಕರಕಲಾಗಿವೆ. ಒಂದು ಅಂಗಡಿಯಲ್ಲಿ ಕಾರ್ಮಿಕರು ಮಲಗಿದ್ದು ಬೆಂಕಿಯಿಂದ ಸಜೀವದಹನಗೊಂಡಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬಂದ ಸ್ಥಳಕ್ಕಾಗಮಿಸಿ ಬೆಂಕಿ ಇತರೆಡೆಗೆ ವ್ಯಾಪಿಸದಂತೆ ತಡೆದಿದ್ದಾರೆ. ಸ್ಪೋಟದ ತೀವ್ರತೆಗೆ ನಿದ್ರಿಸುತ್ತಿದ್ದ ಜನ ಆತಂಕದಿಂದ ಹೊರಗೋಡಿ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪಟಾಕಿ ಅಂಗಡಿಯ ಮುಂಭಾಗದಲ್ಲಿ ಇಂಧನ ಕೇಂದ್ರವಿದ್ದು, ಅದೃಷ್ಟವಶಾತ್ ಬೆಂಕಿ ಹರಡದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಮಲ್ಲಾಡಿ ವಿಷ್ಣು, ನಗರ ಪೊಲೀಸ್ ಆಯುಕ್ತ ಕೆ.ಆರ್. ಟಾಟಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಧನ ಕೇಂದ್ರದ ಸನಿಹದಲ್ಲಿ ಪಟಾಕಿ ಅಂಗಡಿ ತೆರೆಯಲು ಅನುಮತಿ ನೀಡಿದ್ದರ ವಿರುದ್ದ ಸ್ಥಳೀಯರು ಪ್ರತಿಭಟನೆ ನಡೆಸಿದರು.