ನವದೆಹಲಿ, ಅ 22 (DaijiworldNews/DB): ಉದ್ದವ್ ಠಾಕ್ರೆ ಬಣದ ಇನ್ನೂ ನಾಲ್ವರು ಶಾಸಕರು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬಣ ಸೇರ್ಪಡೆಗೆ ನನ್ನ ಸಂಪರ್ಕದಲ್ಲಿದ್ದಾರೆ ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಹೇಳಿದ್ದಾರೆ.
ಕೇಂದ್ರ ಸರ್ಕಾರದ 'ರೋಜ್ಗಾರ್ ಮೇಳ'ದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಶಿವಸೇನೆಯ 56 ಶಾಸಕರ ಪೈಕಿ ಆರೇಳು ಮಂದಿ ಮಾತ್ರ ಉದ್ದವ್ ಬಣದಲ್ಲಿದ್ದಾರೆ. ಉಳಿದ ಎಲ್ಲರೂ ಅಲ್ಲಿಂದ ಹೊರ ಬಂದು ಶಿಂಧೆಯವರೊಂದಿಗೆ ಕೈ ಜೋಡಿಸಿದ್ದಾರೆ. ಸದ್ಯ ಅವರೊಂದಿಗೆ ಉಳಿದಿರುವ ಶಾಸಕರೂ ಅಲ್ಲಿಂದ ಹೊರ ಬರುವ ಯೋಚನೆಯಲ್ಲಿದ್ದು, ಈ ಪೈಕಿ ನಾಲ್ವರು ನನ್ನ ಸಂಪರ್ಕದಲ್ಲಿದ್ದಾರೆ ಎಂದರು. ಆದರೆ ಆ ನಾಲ್ವರು ಶಾಸಕರ ಹೆಸರು ಬಹಿರಂಗಪಡಿಸಲು ರಾಣೆ ನಿರಾಕರಿಸಿದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳ ರಾಜಕೀಯ ಈಗ ಕೇವಲ ಮಾತೋಶ್ರೀಗೆ (ಠಾಕ್ರೆ ಖಾಸಗಿ ನಿವಾಸ ಮತ್ತು ಪಕ್ಷದ ಶಕ್ತಿ ಕೇಂದ್ರ) ಸೀಮಿತಗೊಂಡಿದೆ. ಶಿವಸೇನೆಯಲ್ಲಿ ಅವರೊಂದಿಗೆ ಉಳಿಯುವವರು ಯಾರೂ ಇಲ್ಲದಾಗಿದೆ ಎಂದು ವ್ಯಂಗ್ಯವಾಡಿದರು.