ಬೆಂಗಳೂರು, ಅ 22 (DaijiworldNews/DB): ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆದ ದಿವಂಗತ ನಟ ಪುನೀತ್ರಾಜ್ಕುಮಾರ್ ಅಭಿನಯದ ಕೊನೆಯ ಚಿತ್ರ ಗಂಧದ ಗುಡಿಯ ಪ್ರಿ ರಿಲೀಸ್ ಕಾರ್ಯಕ್ರಮ ಪುನೀತ ಪರ್ವಕ್ಕೆ ಆಗಮಿಸಿದ್ದ ಪುನೀತ್ ಅಭಿಮಾನಿಯೊಬ್ಬರು ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ಗಿರಿರಾಜ್ ಮೃತಪಟ್ಟವರು. ಕರ್ನಾಟಕದ ವಿವಿಧೆಡೆಗಳಿಂದ ಪುನೀತ್ ಅಭಿಮಾನಿಗಳು ಕಾರ್ಯಕ್ರಮ ವೀಕ್ಷಿಸಲು ಅರಮನೆ ಮೈದಾನಕ್ಕೆ ಬಂದಿದ್ದರು. ಅದರಂತೆ ಗಿರಿರಾಜ್ ಅವರೂ ಬಂದಿದ್ದರು. ಕಾರ್ಯಕ್ರಮವನ್ನು ಕುಟುಂಬದೊಂದಿಗೆ ಕುಳಿತು ವೀಕ್ಷಿಸಿದ ಗಿರಿರಾಜ್ ಕಾರ್ಯಕ್ರಮದುದ್ದಕ್ಕೂ ಭಾವುಕರಾಗಿ ಕಣ್ಣೀರು ಹಾಕಿದ್ದರು. ಆದರೆ ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ಗಿರಿರಾಜ್ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ನಟ ಪುನೀತ್ ಅಭಿಮಾನಿಗಳು ಪುನೀತ್ ಬಗ್ಗೆ ಮಾತನಾಡುತ್ತಿದ್ದಾಗ ಭಾವುಕರಾಗಿದ್ದ ಗಿರಿರಾಜ್, ನಟ ಅಮಿತಾಬ್ ಬಚ್ಚನ್ ಮಾತನಾಡುವ ವೇಳೆ ಹೆಚ್ಚು ಕಣ್ಣೀರು ಸುರಿಸಿದ್ದಾರೆ. ಪೋಷಕರು ಸಮಾಧಾನ ಮಾಡಿದರೂ ಅಳುತ್ತಲೇ ಇದ್ದರು ಎಂದು ಗಿರಿರಾಜ್ ತಂದೆ ವೆಂಕಟೇಶ್ ಹೇಳಿದ್ದಾರೆ.