ಲಖನೌ, ಅ 22 (DaijiworldNews/DB): ಧಾರ್ಮಿಕ ಮತಾಂತರ ಮತ್ತು ಜನಸಂಖ್ಯಾ ನೀತಿ ವಿಚಾರವಾಗಿ ಆರೆಸ್ಸೆಸ್ ಪ್ರಸ್ತಾಪಿಸುತ್ತಿರುವುದರ ಹಿಂದೆ ಕೇಂದ್ರ ಸರ್ಕಾರದ ವೈಫಲ್ಯಗಳಿಂದ ಜನರ ಗಮನವನ್ನು ಬೇರೆ ಡೆಳೆಯುವ ತಂತ್ರ ಅಡಗಿದೆ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.
ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ಸಮಾವೇಶವನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ಆರೆಸ್ಸೆಸ್ ದೇಶದ ಪ್ರಚಲಿತ ಸ್ಥಿತಿಯ ಬಗ್ಗೆ ಮೌನ ವಹಿಸಿರುವುದು ಹಾನಿಕಾರಕವಾಗಿದೆ ಎಂದು ಆಪಾದಿಸಿದ್ದಾರೆ.
ಹಣದುಬ್ಬರ, ನಿರುದ್ಯೋಗ, ಹಿಂಸಾಚಾರ, ಅವ್ಯವಸ್ಥೆ ದೇಶದಲ್ಲಿ ತಾಂಡವವಾಡುತ್ತಿದೆ. ಇಂತಹ ವೈಫಲ್ಯಗಳಿಂದ ಜನರನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಹೊಸ ಜನಸಂಖ್ಯಾ ನೀತಿ ಮತ್ತು ಧಾರ್ಮಿಕ ಮತಾಂತರದ ಬಗ್ಗೆ ಆರೆಸ್ಸೆಸ್ ಮಾತನಾಡುತ್ತಿದೆ. ಇವೆಲ್ಲವೂ ಪೂರ್ವಯೋಜಿತ ಷಡ್ಯಂತ್ರಗಳು ಎಂದರು.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಬೆಂಬಲಿಸುವ ಭಾಗವಾಗಿ ಆರೆಸ್ಸೆಸ್ ಇಂತಹ ಷಡ್ಯಂತ್ರಗಳನ್ನು ಮಾಡುತ್ತಿದೆ. ಆದರೆ ಅವರ ಈ ತಂತ್ರಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದು ಅಗತ್ಯವಾಗಿದೆ ಎಂದ ಅವರು, ಬಿಜೆಪಿ ಬೆಂಬಲಿಸುವ ಆರೆಸ್ಸೆಸ್, ಆ ಪಕ್ಷದ ತಪ್ಪು ಮತ್ತು ಜನವಿರೋಧಿ ನೀತಿಗಳನ್ನು ಬಹಿರಂಗವಾಗಿ ವಿರೋಧಿಸುವ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಟೀಕಿಸಿದರು.