ಬಿಜ್ನೋರ್, ಅ 22 (DaijiworldNews/DB): ವಿದ್ಯುತ್ ಕಡಿತದಿಂದ ಡಯಾಲಿಸಿಸ್ ಮಾಡಲಾಗದೆ ಕಿಡ್ನಿ ರೋಗಿಯೊಬ್ಬರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಅಮ್ರೋಹ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಅಮ್ರೋಹದ ಮೊಹಲ್ಲಾ ಮುಲ್ಲಾನದ ನಿವಾಸಿ ಮುಹಮ್ಮದ್ ಅಮೀರ್ ಸಾವನ್ನಪ್ಪಿದವರು. ಕಿರಾಣಿ ಅಂಗಡಿ ನಡೆಸುತ್ತಿದ್ದ ಇವರು ಕಳೆದ ನಾಲ್ಕು ವರ್ಷಗಳಿಂದ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದೆರಡು ವರ್ಷಗಳಿಂದ ಅಮ್ರೋಹ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿದ್ಯುತ್ ಕೈಕೊಟ್ಟು ನೀರು ಪೂರೈಕೆ ಸ್ಥಗಿತಗೊಂಡಿದ್ದರಿಂದ ಡಯಾಲಿಸ್ ಮಾಡಲು ರೋಗಿಗೆ ಸಾಧ್ಯವಾಗಿರಲಿಲ್ಲ. ಇದರಿಂದ ರೋಗಿಯ ಆರೋಗ್ಯ ಪರಿಸ್ಥಿತಿ ಹದಗೆಟ್ಟು ಬಳಿಕ ಅವರು ಮೃತಪಟ್ಟರು.
ಮೊರಾದಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸುತ್ತಿದ್ದ ಅವರಿಗೆ ಸಾಕಷ್ಟು ಖರ್ಚು ತಗುಲಿ ಆರ್ಥಿಕ ಸ್ಥಿತಿ ಹಳಿ ತಪ್ಪಿದ್ದರಿಂದ ಅಮ್ರೋಹ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ತೆರೆದ ಬಳಿಕ ಅಲ್ಲೇ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಪ್ರತಿ ವಾರ ಬುಧವಾರ ಮತ್ತು ಶನಿವಾರ ಅವರಿಗೆ ಡಯಾಲಿಸಿಸ್ ಅಗತ್ಯವಾಗಿತ್ತು ಎಂದು ತಿಳಿದು ಬಂದಿದೆ.