ಅರುಣಾಚಲ ಪ್ರದೇಶ, ಅ 22 (DaijiworldNews/DB): ಇಲ್ಲಿನ ಸಿಯಾಂಗ್ ಜಿಲ್ಲೆಯಲ್ಲಿ ನಿನ್ನೆ ನಡೆದ ಸೇನಾ ಹೆಲಿಕಾಪ್ಟರ್ ಪತನ ದುರಂತದಲ್ಲಿ ಹುತಾತ್ಮರಾದ ಐವರು ಸೈನಿಕರ ಮೃತದೇಹಗಳು ಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ.
ಹೆಲಿಕಾಪ್ಟರ್ನಲ್ಲಿದ್ದ ಎಲ್ಲಾ ಐದು ಮಂದಿ ಸೈನಿಕರು ದುರಂತದಲ್ಲಿ ಸಾವನ್ನಪ್ಪಿದ್ದು, ಎಲ್ಲರ ಮೃತದೇಹಗಳೂ ಇಂದು ಪತ್ತೆಯಾಗಿವೆ. ಮೃತದೇಹಗಳನ್ನು ಹೊರ ತೆಗೆದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು ಎಂದು ತೇಜ್ಪುರದ ರಕ್ಷಣಾ ಪಿಆರ್ಒ ಅವರು ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಲೋವರ್ ಸಿಯಾಂಗ್ ಜಿಲ್ಲೆಯ ಲಿಕಾಬಲಿಯಿಂದ ಶುಕ್ರವಾರ ಬೆಳಗ್ಗೆ ಟೇಕ್ ಆಫ್ ಆಗಿದ್ದ ಸುಧಾರಿತ ಲಘು ಹೆಲಿಕಾಪ್ಟರ್ನಲ್ಲಿ ಇಬ್ಬರು ಪೈಲಟ್ಗಳು ಹಾಗೂ ಮೂವರು ಸೇನಾ ಸಿಬಂದಿ ಸೇರಿ ಐದು ಮಂದಿ ಸಂಚರಿಸುತ್ತಿದ್ದರು. ಆದರೆ ಬೆಳಗ್ಗೆ 10.43ಕ್ಕೆ ಸಿಯಾಂಗ್ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನವಾಗಿ ದುರಂತ ಸಂಭವಿಸಿತ್ತು.