ಕೋಲ್ಕತಾ, ಅ 22 (DaijiworldNews/DB): ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರದ ದುರಾಡಳಿತ ಮತ್ತು ಭ್ರಷ್ಟಾಚಾರ ಮಿತಿ ಮೀರಿದೆ. ಇಡೀ ದೇಶವೇ ಇದನ್ನು ನೋಡುತ್ತಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಪ್ರತಿಭಟನಾನಿರತ ಶಿಕ್ಷಕ ಉದ್ಯೋಗಾಕಾಂಕ್ಷಿಗಳ ಮೇಲೆ ಮಧ್ಯರಾತ್ರಿ ಬಲವಂತದಿಂದ ಲಾಠಿ ಪ್ರಯೋಗ ನಡೆಸಿರುವ ಪಶ್ಚಿಮ ಬಂಗಾಳ ಪೊಲೀಸರ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಶಿಕ್ಷಕರ ನೇಮಕಾತಿಯಲ್ಲಿ ಹಗರಣ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಮಮತಾ ಸರ್ಕಾರ ಪ್ರತಿಭಟನಾಕಾರರನ್ನು ಹತ್ತಿಕ್ಕುತ್ತಿರುವುದು ಅಕ್ಷಮ್ಯ ಎಂದರು.
ಪಾರ್ಥ ಚಟರ್ಜಿ ಈ ಹಗರಣದ ಮುಖ್ಯ ರೂವಾರಿ. ಅವರ ವಿರುದ್ದ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಅವರು, ಇಡೀ ದೇಶವೇ ಪಶ್ಚಿಮ ಬಂಗಾಳದ ದುರಾಡಳಿತ ಮತ್ತು ಭ್ರಷ್ಟಾಚಾರವನ್ನು ನೋಡುತ್ತಿದೆ. ಸಿಂಗೂರ್ನಲ್ಲಿ ಟಾಟಾ ಕಂಪೆನಿಯ ಫ್ಯಾಕ್ಟರಿಯನ್ನು ಮುಚ್ಚಿಸಿರುವ ಮಮತಾ ರಾಜಕೀಯ ಸ್ವಾರ್ಥವನ್ನು ಅಲ್ಲಿನ ಪ್ರತಿಯೊಬ್ಬ ಜನರೂ ಅರಿತುಕೊಂಡಿದ್ದಾರೆ ಎಂದು ಹರಿಹಾಯ್ದರು.
2014ರ ಟಿಇಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರನ್ನು ಅರ್ಹತಾ ಪಟ್ಟಿಯಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಶಿಕ್ಷಕ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪಶ್ಚಿಮಬಂಗಾಳ ಪೊಲೀಸರು ಬಲವಂತದಿಂದ ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದ್ದರು.