ನವದೆಹಲಿ, ಅ 21 (DaijiworldNews/DB): ನನ್ನನ್ನು ಕೂಡಲೇ ದೇಶದ ರಾಷ್ಟ್ರಪತಿಯನ್ನಾಗಿ ನೇಮಿಸಿ ಎಂದು ವ್ಯಕ್ತಿಯೊಬ್ಬ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ!
ಕಿಶೋರ್ ಜಗನ್ನಾಥ್ ಸಾವಂತ್ ಎಂಬಾತ ತನ್ನನ್ನು ರಾಷ್ಟ್ರಪತಿಯಾಗಿ ಈಗಲೇ ನೇಮಕ ಮಾಡಿ ಎಂಬುದಾಗಿ ಅರ್ಜಿ ಸಲ್ಲಿಸಿದಾತ. ಸುಪ್ರೀಂಕೋಟ್ ನ್ಯಾಯಮೂರ್ತಿಗಳಾದ ಜಸ್ಟೀಸ್ ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠದ ಎದುರು ಹೀಗೊಂದು ಅರ್ಜಿ ವಿಚಾರಣೆಗೆ ಬಂದಿದ್ದು, ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಕ್ಷುಲ್ಲಕ ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸಿದ್ದೇಕೆ ಎಂದು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ಗೂ ಚಾಟಿ ಬೀಸಿದ್ದಾರೆ. ಅಲ್ಲದೆ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಅರ್ಜಿದಾರ ಕೀಳು ಮಟ್ಟದ ಹಾಸ್ಯಾಸ್ಪದ ಟೀಕೆಗಳನ್ನು ಮಾಡಿದ್ದು, ಅದನ್ನು ಕಡತದಿಂದ ತೆಗೆದು ಹಾಕಬೇಕು. ಅಲ್ಲದೆ ಇದು ನ್ಯಾಯಾಂಗ ಹಾಗೂ ನ್ಯಾಯಾಲಯದ ಕಾರ್ಯ ಕಲಾಪಗಳ ದುರ್ಬಳಕೆ ಎಂದು ಪೀಠ ಆಕ್ರೋಶ ಹೊರ ಹಾಕಿದೆ.
ಇತ್ತೀಚೆಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ನೀಡಲಿಲ್ಲ. ಹೀಗಾಗಿ ನನ್ನ ವಾದವನ್ನು ಆಲಿಸಬೇಕು ಎಂದು ದೂರುದಾರ ಸಾವಂತ್ ಕಲಾಪಕ್ಕೆ ಆಗಮಿಸಿ ಮನವಿ ಮಾಡಿದ್ದ. ತಾನೊಬ್ಬ ಪರಿಸರವಾದಿಯಾಗಿದ್ದು, ವಿಶ್ವಾದ್ಯಂತ ಸದ್ಯ ಎದುರಾಗಿರುವ ಅವ್ಯವಸ್ಥೆ ಸುಧಾರಣೆಗೆ ಶ್ರಮ ವಹಿಸುವುದಾಗಿ ಹೇಳಿದ್ದ. ಆದರೆ ಆತನ ವಾದವನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್, ಸಾರ್ವಜನಿಕ ಸಭೆಗಳಲ್ಲಿ ನಿಮ್ಮ ವಿಷಯ ಪರಿಣತಿಯ ಭಾಷಣ ಮಾಡಬಹುದು. ಆದರೆ ರಾಷ್ಟ್ರಪತಿ ಮಾಡಿ ಎಂಬ ಅರ್ಜಿಗಳು ಸ್ವೀಕಾರಕ್ಕೆ ಅರ್ಹವಾಗಿರುವುದಿಲ್ಲ ಎಂದು ಹೇಳಿತು.