ಮುಂಬೈ, ಅ 21 (DaijiworldNews/DB): ಸಿಬಿಐಯು ಪ್ರಕರಣಗಳ ತನಿಖೆ ನಡೆಸುವ ಸಾಮಾನ್ಯ ಒಪ್ಪಿಗೆಯನ್ನು ವಾಪಾಸ್ ಪಡೆದಿದ್ದ ಹಿಂದಿನ ಮಹಾ ವಿಕಾಸ್ ಆಘಾಡಿ ಸರ್ಕಾರದ ನಿರ್ಧಾರವನ್ನು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಹಿಂತೆಗೆದುಕೊಂಡಿದೆ. ಆ ಮೂಲಕ ಪ್ರಕರಣಗಳ ತನಿಖೆಯನ್ನು ಮುಕ್ತವಾಗಿ ನಡೆಸಲು ಸಿಬಿಐಗೆ ಅವಕಾಶ ನೀಡಲಾಗಿದೆ.
ಈ ಸಾಮಾನ್ಯ ಒಪ್ಪಿಗೆಯನ್ನು ಮರು ಸ್ಥಾಪಿಸಲು ಕೋರಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದ ಗೃಹ ಇಲಾಖೆಯು ಸಿಎಂ ಏಕನಾಥ ಶಿಂಧೆ ಅವರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಮ್ಮತಿಸಿದ್ದು, ಸಿಬಿಐಗೆ ಮುಕ್ತ ತನಿಖೆಗೆ ಅವಕಾಶ ನೀಡಿದೆ.
ಮುಂದೆ ಯಾವುದೇ ತನಿಖೆ ನಡೆಸಲು ಸಿಬಿಐಗೆ ಮುಕ್ತ ಅವಕಾಶವಿದೆ. ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯಬೇಕಿಲ್ಲ ಎಂದವರು ಈ ವೇಳೆ ಹೇಳಿದ್ದಾರೆ.
ತನಿಖಾ ಸಂಸ್ಥೆಗಳನ್ನು ರಾಜಕೀಯ ಲಾಭದ ಉದ್ದೇಶದಿಂದ ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವು 2020ರ ಅಕ್ಟೋಬರ್ 21ರಂದು ಸಿಬಿಐಗೆ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿತ್ತು. ಅದಾದ ಸರಿಯಾಗಿ ಎರಡು ವರ್ಷದ ಬಳಿಕ ಒಪ್ಪಿಗೆ ಮರು ಸ್ಥಾಪನೆಗೊಂಡಿದೆ.